ಬೆಂಗಳೂರು: ಉದ್ಯಮಿಯೊಬ್ಬರ ಕಚೇರಿಯಲ್ಲಿ ಹಂತ ಹಂತವಾಗಿ ಚಿನ್ನಾಭರಣ ಹಾಗೂ ನಗದು ದೋಚಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ ಬಂಧಿತ ಆರೋಪಿಯಾಗಿದ್ದು, ಆತನಿಂದ 89.09 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
8 ವರ್ಷಗಳ ಹಿಂದೆಯೇ ನಕಲಿ ಕೀ ಮಾಡಿಸಿದ್ದ ಆರೋಪಿ: ಗ್ರಾನೈಟ್ ಉದ್ಯಮಿಯೊಬ್ಬರ ಜಯನಗರದ 8ನೇ ಬ್ಲಾಕ್ನ ಸಂಗಂ ಸರ್ಕಲ್ನಲ್ಲಿರುವ ಕಚೇರಿಯಲ್ಲಿ 20 ವರ್ಷಗಳಿಂದಲೂ ವ್ಯವಸ್ಥಾಪಕನಾಗಿ ಕಾರ್ತಿಕ್ ಕೆಲಸ ಮಾಡಿಕೊಂಡಿದ್ದ. ಸಾಲದ ಸುಳಿಯಲ್ಲಿ ಸಿಲುಕಿದ್ದ ಆರೋಪಿ, ಅದನ್ನು ತೀರಿಸಲು ಕಳ್ಳತನ ಮಾಡಲು ಸಂಚು ರೂಪಿಸಿ 8 ವರ್ಷಗಳ ಹಿಂದೆಯೇ ಕಚೇರಿಯ ಕಬೋರ್ಡ್ ನಕಲಿ ಕೀಯನ್ನು ಸಿದ್ಧಪಡಿಸಿಟ್ಟುಕೊಂಡಿದ್ದ. ಆ ಕೀ ಬಳಸಿ ಮಾಲೀಕರು ಇಲ್ಲದ ವೇಳೆ ಸ್ವಲ್ಪ ಸ್ವಲ್ಪವೇ ಚಿನ್ನಾಭರಣ, ಬೆಳ್ಳಿ, ನಗದನ್ನು ದೋಚುತ್ತಿದ್ದ.
ಮಾಲೀಕರಿಗೆ ಅನುಮಾನ ಬಂದು ಪ್ರಶ್ನಿಸಿದಾಗ ಯಾರೋ ಕಳ್ಳತನ ಮಾಡಿರಬಹುದು ಎಂದು ಹಾರಿಕೆಯ ಉತ್ತರ ನೀಡುತ್ತಿದ್ದ. ವ್ಯವಸ್ಥಾಪಕ ಕಾರ್ತಿಕ್ ಬಗ್ಗೆ ಅನುಮಾನಗೊಂಡ ಉದ್ಯಮಿ ಜಯನಗರ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಜುಲೈ 28ರಂದು ನಕಲಿ ಕೀ ಹಾಗೂ ನಗದು ಸಮೇತ ಕಾರ್ತಿಕ್ನನ್ನು ಆತನ ಮನೆಯಲ್ಲೇ ವಶಕ್ಕೆ ಪಡೆದಿದ್ದರು. ಆತನನ್ನು ವಿಚಾರಣೆಗೊಳಪಡಿಸಿದಾಗ ಸಾಲ ತೀರಿಸಲು ತಾನು ಕಳ್ಳತನ ಎಸಗಿರುವುದಾಗಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕದ್ದ ಚಿನ್ನದ ಪೈಕಿ ತ್ಯಾಗರಾಜನಗರದ ಜ್ಯುವೆಲ್ಲರಿ ಅಂಗಡಿ ಹಾಗೂ ಫೈನಾನ್ಸ್ ಕಂಪನಿಯಲ್ಲಿ ಕೆಲವನ್ನು ಅಡವಿಟ್ಟು ಹಣ ಪಡೆದುಕೊಂಡಿದ್ದ. ಸದ್ಯ ಅವುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ಕಾರ್ತಿಕ್ನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
1 ಕೋಟಿಗೂ ಅಧಿಕ ಮೌಲ್ಯದ ನಗ-ನಾಣ್ಯ ದೋಚಿದ್ದ ಮೂವರ ಬಂಧನ: ಮಾಜಿ ಕಾರ್ಪೊರೇಟರ್ ಮನೆಯಲ್ಲಿ ಕೋಟಿ ಮೌಲ್ಯದ ನಗ ನಾಣ್ಯ ದೋಚಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಜಯನಗರ ಠಾಣೆ ಪೊಲೀಸರು ಇತ್ತೀಚಿಗೆ ಬಂಧಿಸಿದ್ದರು. ರಘು, ಮಿಥುನ್ ಹಾಗೂ ಜೈದೀಪ್ ಬಂಧಿತ ಆರೋಪಿಗಳು.
ಜಯನಗರ 5ನೇ ಬ್ಲಾಕ್ನಲ್ಲಿರುವ ಮಾಜಿ ಕಾರ್ಪೊರೇಟರ್ ಟಿ.ಎಸ್. ವಸಂತ್ ಕುಮಾರ್ ಭವಾನಿ ಅವರ ಮನೆಯಲ್ಲಿ ಜುಲೈ 20ರಂದು ಕಳ್ಳತನ ಮಾಡಿದ್ದ ಆರೋಪಿಗಳಿಂದ ಬರೋಬ್ಬರಿ 78.50 ಲಕ್ಷ ರೂ. ಮೌಲ್ಯದ 1.85 ಕೆ.ಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
Laxmi News 24×7