ರಾಯಚೂರು: ಮಂತ್ರಾಲಯದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವಕ್ಕೆ ಶುಕ್ರವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ಶ್ರೀಮಠದ ಮುಂಭಾಗದಲ್ಲಿ ಸಾಂಪ್ರದಾಯಿಕ ಧ್ವಜಾರೋಹಣ ಸಮಾರಂಭವು ಅಪಾರ ಭಕ್ತಿ ಮತ್ತು ಭವ್ಯತೆಯಿಂದ ನಡೆಯಿತು. ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಗೋ ಪೂಜೆ ಮತ್ತು ಅಶ್ವ ಪೂಜೆ ನೆರವೇರಿಸಿದರು.
ನಂತರ ಆರಾಧನಾ ಆಚರಣೆಗಳ ಆರಂಭವನ್ನು ಸೂಚಿಸುವ ವಿಧ್ಯುಕ್ತ ಧ್ವಜಾರೋಹಣವು ವೇದ ಪಠಣ ಹಾಗೂ ಮಂಗಳವಾದ್ಯಗಳೊಂದಿಗೆ ನಡೆಯಿತು. ಈ ಕ್ಷಣಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಯಾದರು.ನಂತರ, ಶ್ರೀ ಯೋಗೀಂದ್ರ ಸಭಾಮಂದಿರದಲ್ಲಿ ದೀಪ ಬೆಳಗಿಸುವ ಮೂಲಕ ಶ್ರೀ ಸ್ವಾಮೀಜಿಯವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.
ಸಪ್ತ ರಾತ್ರೋತ್ಸವದ ಮೊದಲ ದಿನದಂದು ಶ್ರೀ ಮಠದಲ್ಲಿ ಧಾನ್ಯ ಪೂಜೆಯನ್ನು ನೆರವೇರಿಸಲಾಯಿತು. ರಾಯರ ಮೂಲ ಬೃಂದಾವನದ ಬಳಿಯ ಕಂಬಕ್ಕೆ ಭಕ್ತರು ನೀಡಿರುವ ಚಿನ್ನದ ಕವಚಗಳನ್ನು ಅಳವಡಿಸಲಾಯಿತು. ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ,
ನಿನ್ನೆ ಬೆಳಗ್ಗೆಯಿಂದ ಶ್ರೀಮಠದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಆಗಸ್ಟ್ 14ರವರೆಗೆ ಸಪ್ತ ರಾತ್ರೋತ್ಸವ ಜರುಗಲಿದೆ.
Laxmi News 24×7