ಬೆಂಗಳೂರು: ಕಳ್ಳತನವನ್ನೇ ಕಾಯಕ ಮಾಡಿಕೊಂಡು ನಿರಂತರವಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಂತಾರಾಜ್ಯ ಖದೀಮನನ್ನ ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಸಲೀಂ ಆಲಿಯಾಸ್ ಬಾಂಬೆ ಸಲೀಂ ಬಂಧಿತ ಚೋರ. ಈತನಿಂದ 5 ಲಕ್ಷ ಮೌಲ್ಯದ ಚಿನ್ನಾಭರಣ, ದುಬಾರಿ ಬೆಲೆಯ ಸೀರೆಗಳನ್ನ ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಾನ್ಸ್ಟೇಬಲ್ ಕಣ್ತಪ್ಪಿಸಿ ಆತನ ಸಮವಸ್ತ್ರ ಧರಿಸಿ ಪತ್ನಿಗೆ ಸಲೀಂ ವಿಡಿಯೋ ಕರೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿತ್ತು. ಈ ಸಂಬಂಧ ನಿರ್ಲಕ್ಷ್ಯದ ಆರೋಪದ ಸಂಬಂಧ ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ ಹೆಚ್.ಆರ್ ಸೋನಾರ್ ಅವರನ್ನ ಸಸ್ಪೆಂಡ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಮೀನು ಪಡೆದು ಮತ್ತೆ ಕಳ್ಳತನ: ಮೂಲತಃ ಆರೋಪಿಯ ಮುಂಬೈನವನಾಗಿದ್ದು, ಈತನ ವಿರುದ್ಧ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ 50ಕ್ಕೂ ಹೆಚ್ಚು ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಬಂಧಿಸಿ ಜೈಲಿಗಟ್ಟಿದ್ದರೂ ಜಾಮೀನು ಪಡೆದು ಮತ್ತೆ ಕಳ್ಳತನ ಮಾಡುವುದನ್ನ ಚಾಳಿ ಮಾಡಿಕೊಂಡಿದ್ದ. ಕಳೆದ ಜೂನ್ 23ರಂದು ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ, ದುಬಾರಿ ಬೆಲೆಯ ಸೀರೆಗಳ ಕಳ್ಳತನ ಮಾಡಿ ಪರಾರಿಯಾಗಿದ್ದ. ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಸುದರ್ಶನ್ ಹಾಗೂ ಪಿಎಸ್ಐ ರಾಜಶೇಖರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಆರೋಪಿ ಮುಂಬೈನಿಂದ ವಿಮಾನದ ಮೂಲಕ ಬಂದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಇತ್ತೀಚೆಗೆ ಹೊಸಕೋಟೆ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕಳ್ಳನ ತುಂಟಾಟಕ್ಕೆ ಪೊಲೀಸ್ ಸಸ್ಪೆಂಡ್: ಕಳ್ಳತನ ಪ್ರಕರಣದಲ್ಲಿ ಬಂಧಿಸಿ ಆರೋಪಿಯ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಪೊಲೀಸ್ ಸಮವಸ್ತ್ರ ಧರಿಸಿ ಪತ್ನಿಗೆ ವಿಡಿಯೋ ಕರೆ ಮಾಡಿರುವ ಪೋಟೊ ಪತ್ತೆಯಾಗಿತ್ತು. ಈ ಬಗ್ಗೆ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈ ಹಿಂದೆ ಗೋವಿಂದಪುರ ಪೊಲೀಸರು ಬಂಧಿಸಿ ಕಳ್ಳತನ ಮಾಡಿದ್ದ ಮಾಲುಗಳನ್ನ ವಶಕ್ಕೆ ಪಡೆಯಲು ನಗರದ ಹೊರವಲಯಕ್ಕೆ ಕರೆದುಕೊಂಡು ಹೋಗಿದ್ದರು. ಕಾನ್ಸ್ಟೇಬಲ್ ಎಚ್.ಆರ್. ಸೋನಾರ್ ಅವರ ಭದ್ರತೆಯೊಂದಿಗೆ ಹೋಟೆಲ್ನಲ್ಲಿ ಉಳಿಯಲಾಗಿತ್ತು.
ಈ ವೇಳೆ ಪೊಲೀಸ್ ಪೇದೆ ಇಲ್ಲದ ವೇಳೆ ಆತನ ಸಮವಸ್ತ್ರ ಧರಿಸಿ ಪತ್ನಿಗೆ ವಿಡಿಯೊ ಕರೆ ಮಾಡಿ ಪೋಟೊ ಕ್ಲಿಕಿಸಿಕೊಂಡಿದ್ದ. ಇದನ್ನು ಖದೀಮ ಸಲೀಂ ಪೊಲೀಸರ ಎದುರು ಹೇಳಿಕೆ ನೀಡಿದ್ದ. ಈತ ನೀಡಿದ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಸಿದಾಗ ಕಾನ್ಸ್ಟೇಬಲ್ ನಿರ್ಲಕ್ಷ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ಪೇದೆಯನ್ನ ಅಮಾನತು ಮಾಡಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
Laxmi News 24×7