ಗಂಗಾವತಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಹೇಳಿಕೆಯನ್ನು ಉಲ್ಲೇಖಿಸಿ ನಟಿ ರಮ್ಯಾ ಮಾಡಿದ್ದ ಪೋಸ್ಟ್ಗೆ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ ಮತ್ತೋರ್ವ ಆರೋಪಿಯನ್ನು ಪೊಲೀಸರು ಕೊಪ್ಪಳದಲ್ಲಿ ಬಂಧಿಸಿದ್ದಾರೆ.
ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದ ಮಂಜುನಾಥ್ ಎಂಬಾತನನ್ನು ಬೆಂಗಳೂರಿನ ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಐದನೇ ಆರೋಪಿ ಬಂಧನವಾಗಿದೆ.
40 ಕ್ಕೂ ಹೆಚ್ಚು ಜನರ ಮೇಲೆ ದೂರು ದಾಖಲಾಗಿದ್ದು, ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಸದ್ಯ ಬಂಧನವಾಗಿರುವ ಮಂಜುನಾಥನ ಜಾಡು ಪತ್ತೆ ಮಾಡಿದಾಗ, ಆತನ ಐಪಿ ಅಡ್ರೆಸ್ ಸಿಕ್ಕಿತ್ತು. ಬಳಿಕ, ಗಂಗಾವತಿಯ ಮೂಲಕ ಸಿಂಗನಾಳ ಗ್ರಾಮಕ್ಕೆ ತೆರಳಿದ ಬೆಂಗಳೂರು ಪೊಲೀಸರು, ಅಲ್ಲಿದ್ದ ಜನರಿಗೆ ಯುವಕನ ವಿಳಾಸ ಕೇಳಿದ್ದಾರೆ.
ಅಪರಿಚಿತ ವ್ಯಕ್ತಿಗಳು ಗ್ರಾಮಕ್ಕೆ ಬಂದು ಮಾಹಿತಿ ಕೇಳಿದ್ದು ತುಸು ಆತಂಕ ಮೂಡಿಸಿತ್ತು. ಬಳಿಕ ಪೊಲೀಸರು ಸಮಜಾಯಿಸಿ ನೀಡಿದ ಬಳಿಕ ಯುವಕನ ಮಾಹಿತಿ ನೀಡಿದ್ದಾರೆ. ನಂತರ ಆರೋಪಿ ಮಂಜುನಾಥ್ ನನ್ನು ಬಂಧಿಸಿದ್ದಾರೆ. ನಿಯಮದಂತೆ, ಈ ಬಗ್ಗೆ ಕಾರಟಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ದೂರು: ಸಾಮಾಜಿಕ ಜಾಲತಾಣದಲ್ಲಿ ತಾವು ಹಾಕಿದ ಪೋಸ್ಟ್ಗೆ ಅತಿ ಕೆಟ್ಟದಾಗಿ ಕಮೆಂಟ್ ಮಾಡಲಾಗಿದೆ ಎಂದು ಆರೋಪಿಸಿ ನಟಿ ರಮ್ಯಾ ಅವರು ಕಮೀಷನರ್ ಆಫೀಸ್ಗೆ ಖುದ್ದಾಗಿ ತೆರಳಿ ದೂರು ನೀಡಿದ್ದರು. ಅದರಂತೆ ದರ್ಶನ್ ಅಭಿಮಾನಿಗಳು ಎಂದು ಹೇಳಲಾದ 40 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 2023ರ 351(2) (ಕ್ರಿಮಿನಲ್ ಬೆದರಿಕೆಯ ಉದ್ದೇಶದ ಅಪರಾಧ), 351(3) (ಸಾವು, ತೀವ್ರ ನೋವುಂಟು ಮಾಡುವ ಉದ್ದೇಶದ ಕ್ರಿಮಿನಲ್ ಬೆದರಿಕೆ), 352 (ಉದ್ದೇಶಪೂರ್ವಕ ಅವಮಾನದ ಮೂಲಕ ಶಾಂತಿಭಂಗದ ಯತ್ನ), 75(1) (ಲೈಂಗಿಕ ಕಿರುಕುಳ) 75(1)(IV) (ಲೈಂಗಿಕ ಟೀಕೆ) ಹಾಗೂ 79 (ಮಹಿಳೆಯ ಗೌರವಕ್ಕೆ ಧಕ್ಕೆ) ಆರೋಪದಡಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದ್ದರೆ, ಇಬ್ಬರು ಅಪ್ರಾಪ್ತರಾಗಿದ್ದು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗಾಗಿ ಅವರು ಕಮೆಂಟ್ ಮಾಡಲು ಬಳಸಿದ ಸಾಧನದ ಐಪಿ ಅಡ್ರೆಸ್ ಅನ್ನು ಪತ್ತೆ ಮಾಡಲಾಗಿದೆ. ಶೀಘ್ರದಲ್ಲೆ ಬಂಧಿಸಲಾಗುವುದು ಎಂದು ಸೈಬರ್ ಅಪರಾಧ ವಿಭಾಗದ ಪೊಲೀಸರು ತಿಳಿಸಿದ್ದಾರೆ.
Laxmi News 24×7