ಹಾವೇರಿ: ಜಿಲ್ಲೆಯ ರಾಣೆಬೆನ್ನೂರಿನ ನಾಡಿಗೇರ್ ಓಣಿಯ ಮನೆಯ ಶೌಚಾಲಯದೊಳಗೆ ಪ್ರತ್ಯಕ್ಷವಾಗಿದ್ದ ಚಿರತೆಯನ್ನು ಕೊನೆಗು ಸೆರೆಹಿಡಿಯಲಾಯಿತು. ಪಿ.ಟಿ.ಕಾಕಿ ಎಂಬವರ ಮನೆಯ ಶೌಚಾಲಯದಲ್ಲಿ ಚಿರತೆ ಅವಿತು ಕುಳಿತಿತ್ತು. ಡ್ರೋನ್ ಕ್ಯಾಮೆರಾ ಮತ್ತು ಬಲೆ, ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದೆ.
ನಿರಂತರ ಎಂಟು ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆಯನ್ನು ಸೆರೆಹಿಡಿಯಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಇತರರು ಅರಿವಳಿಕೆ ಚುಚ್ಚು ಮದ್ದು ನೀಡಿ ಚಿರತೆಯನ್ನು ಬೋನಿನಲ್ಲಿ ಹಾಕಿಕೊಂಡು ಸ್ಥಳದಿಂದ ರವಾನಿಸಿದ್ದಾರೆ.
ಕಾರ್ಯಾಚರಣೆ ಬಗ್ಗೆ ಮಾತನಾಡಿದ ಅರಿವಳಿಕೆ ತಜ್ಞೆ ಡಾ. ಪವಿತ್ರಾ ಜೈನ್, ”ಸೆರೆ ಹಿಡಿದ ಚಿರತೆ 50 ರಿಂದ 60 ಕೆ.ಜಿ ತೂಕ ಇದೆ. ಮೂರ್ನಾಲ್ಕು ವರ್ಷ ವಯಸ್ಸಿನ ಚಿರತೆ ಇರಬಹುದು. ಅರವಳಿಕೆ ನೀಡಲಾಗಿದೆ, 50 ನಿಮಿಷದಲ್ಲಿ ಚಿರತೆಗೆ ಪ್ರಜ್ಞೆ ಬರಬಹುದು. ಸುಧಾರಿಸಿಕೊಳ್ಳಲು 4 ತಾಸು ಸಮಯ ಬೇಕಾಗುತ್ತದೆ. ನಮ್ಮ ಸುರಕ್ಷತೆ ಜೊತೆಗೆ ಪ್ರಾಣಿಯ ಸುರಕ್ಷತೆ ಕೂಡ ಮುಖ್ಯ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇದ್ದೇ ಇರುತ್ತದೆ. ನಾವು ಡಿಸ್ಟರ್ಬ್ ಮಾಡಿದರೆ ಅದೂ ಕೂಡ ರಿಯಾಕ್ಟ್ ಮಾಡುತ್ತದೆ. ಯಾವುದೇ ಪ್ರಾಣಿ ಈತರ ಸಂಘರ್ಷಕ್ಕೆ ಸಿಲುಕಿದಾಗ ಸಾರ್ವಜನಿಕರೂ ಕೂಡ ಶಾಂತ ರೀತಿಯಿಂದ ವರ್ತಿಸಬೇಕು” ಎಂದು ತಿಳಿಸಿದರು.
ಕಾರ್ಯಾಚರಣೆ ಸಂದರ್ಭದಲ್ಲಿ ಡಿಎಫ್ಒ ಅಬ್ದುಲ್ ಅಜಿಜ್ ಶೇಖ್ ಈ ಕುರಿತು ಪ್ರತಿಕ್ರಿಯಿಸಿದ್ದರು. “25ಕ್ಕೂ ಅಧಿಕ ಸಿಬ್ಬಂದಿ, ವಲಯ ಅರಣ್ಯಾಧಿಕಾರಿ, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡ್ರೋನ್ ಬಳಸಲಾಗುತ್ತಿದೆ. ಸುತ್ತಲೂ ಬಲೆ ಹಾಕಲಾಗಿದೆ. ಬೋನು ಇರಿಸಲಾಗಿದೆ. ಶೀಘ್ರದಲ್ಲೇ ಚಿರತೆಯನ್ನು ಸೆರೆ ಹಿಡಿಯುತ್ತೇವೆ. ಅರಿವಳಿಕೆ ತಜ್ಞರು ಧಾರವಾಡದಿಂದ ಬರುತ್ತಿದ್ದಾರೆ. ಜನರೂ ಸಹಕರಿಸಬೇಕು” ಎಂದು ಅವರು ಹೇಳಿದ್ದರು.
ಹಾಗೇ, ಹಾವೇರಿ ಎಸ್ಪಿ ಯಶೋಧ ಅವರು ಮಾಹಿತಿ ನೀಡಿದ್ದರು. “ಚಿರತೆ ಪ್ರತ್ಯಕ್ಷವಾಗಿರುವ ಮಾಹಿತಿ ಪೊಲೀಸ್ ಠಾಣೆಗೆ ಬಂತು. ನಮ್ಮ ಸಿಬ್ಬಂದಿ, ಕಂದಾಯ ಕಚೇರಿ ಅಧಿಕಾರಿಗಳು, ತಹಶೀಲ್ದಾರ್ ಎಲ್ಲರೂ ಬಂದಿದ್ದಾರೆ. ಕುತೂಹಲಕ್ಕಾಗಿ ಜನ ಸೇರಿದ್ದು, ಅವರನ್ನೆಲ್ಲ ದೂರ ಕಳುಹಿಸಿದ್ದೇವೆ” ಎಂದಿದ್ದರು.
Laxmi News 24×7