53 ಕೋಟಿ ಬಂಗಾರ ಕಳ್ಳತನ ಬಯಲು: ಚಾಲೆಂಜ್ ಆಗಿ ತೆಗೆದುಕೊಂಡ ಪೊಲೀಸರು
ವಿಜಯಪುರ ಜಿಲ್ಲೆಯ ಮನಗೂಳಿಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಬಗ್ಗೆ ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ.
ಒಂದಲ್ಲ ಎರಡಲ್ಲ ಬರೋಬ್ಬರಿ 53 ಕೋಟಿ ಬೆಲೆಯ ಚಿನ್ನ ಕದ್ದು ಖದೀಮರು ಎಸ್ಕೇಪ್ ಆಗಿದ್ದಾರೆ. ತನಿಖೆಗೆಗಾಗಿ ಎಂಟು ವಿಶೇಷ ತಂಡ ರಚನೆ ಮಾಡಲಾಗಿದೆ.
ಕಳೆದ ಮೇ 25 ರಂದು ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣದ ಇಂದು ಪೊಲೀಸರು ಅಧಿಕೃತ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಪೊಲೀಸರ ಮಾಹಿತಿ ಗ್ರಾಹಕರನ್ನು ಬೆಚ್ಚಿ ಬೀಳೀಸುವಂತೆ ಮಾಡಿದ್ದು, ನಮ್ಮ ಬಂಗಾರದ ಕಥೆ ಏನಾಗಿದೆ ಅನ್ನೋ ಚಿಂತೆಯಲ್ಲಿದ್ದಾರೆ. ಬ್ಯಾಂಕ್ ನಲ್ಲಿದ್ದ 58 ಕೆಜಿ 975 ಗ್ರಾಂ ಚಿನ್ನ ಹಾಗೂ 5.20 ಲಕ್ಷ ನಗದು ಕದ್ದು ಖದೀಮರು ಪರಾರಿಯಾಗಿದ್ದಾರೆ. ಘಟನೆ ನಡೆದ ಬಳಿಕ ಕಳ್ಳತನವಾದ ಚಿನ್ನಾಭರಣ ಹಾಗೂ ಬ್ಯಾಂಕ್ ನಲ್ಲಿ ಉಳಿದಿರುವ ಚಿನ್ನ ಲೆಕ್ಕಹಾಕಿ ಇಂದು ಮಾಹಿತಿ ಬಹಿರಂಗ ಪಡಿಸಿದ್ದಾರೆ. 6 ರಿಂದ 8 ಜನ ಕಳ್ಳರಿಂದ ಕೃತ್ಯ ಎಂದು ಪೊಲೀಸರಿಗೆ ಮಾಹಿತಿ ದೊರೆತಿದ್ದು, ಖದೀಮರ ಬಂಧನಕ್ಕಾಗಿ ಎಂಟು ವಿಶೇಷ ತಂಡಗಳನ್ನ ರಚನೆ ಮಾಡಿದ್ದಾರೆ.
ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದ ಹಿರಿಯ ಅಧಿಕಾರಿಗಳು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಹಲವು ಅಂಶಗಳು ಸಿಕ್ಕಿದು, ಖದೀಮರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಎರಡು ದಿನಗಳ ಕಾಲ ಹೊಂಚು ಹಾಕಿ ಕಳ್ಳತನ ಮಾಡಿರೋದು ಗೊತ್ತಾಗಿದೆ. ಅಲ್ಲದೆ ಬ್ಯಾಂಕ್ ಕಳ್ಳತನಕ್ಕೆ ಲಾಕರ್ ನಕಲಿ ಕೀ ಬಳಕೆ ಮಾಡಿದ್ದು ತನಿಖೆಯಲ್ಲಿ ಪತ್ತೆಯಾಗಿದೆ. ಮೊದಲು ಪ್ರವೇಶ ದ್ವಾರದ ಬೀಗ ಒಡೆದು ಬ್ಯಾಂಕ್ ಒಳಗೆ ನುಗ್ಗಿರೋ ಕಳ್ಳರು, ಬಳಿಕ ಸೈರನ್ ಆಫ್ ಮಾಡಿ ಲಾಕರ್ ನ ನಕಲಿ ಕೀ ಬಳಕೆ ಮಾಡಿದ್ದಾರೆ.
ಬಂಗಾರ ಇಟ್ಟಿದ್ದ ಒಂದು ಲಾಕರ್ ಮಾತ್ರ ಓಪನ್ ಮಾಡಿ ಮತ್ತೊಂದು ಲಾಕರ್ ನಲ್ಲಿದ್ದ ಬಂಗಾರ ಹಾಗೇಯೆ ಬಿಟ್ಟಿದ್ದಾರೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಬ್ಯಾಂಕ್ ಬಗ್ಗೆ ಸಂಪೂರ್ಣ ಮಾಹಿತಿ ಇರುವವರೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕಳ್ಳತನ ಮಾಡಿದ ಶಾಖೆಯಲ್ಲಿ ಕಿಟಕಿ ಮುರಿದಿದ್ದು, ಕಪ್ಪು ಬಣ್ಣದ ಗೊಂಬೆ ಪೂಜೆ ಮಾಡಿದ್ದು, ತನಿಖೆ ಗಮನ ಬೇರೆಡೆ ಸೆಳೆಯಲು ಮಾಡಿರೋ ಕೃತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಎಂಟು ತಂಡಗಳ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ. ರಾಜ್ಯದಲ್ಲೇ ಅತ್ಯಂತ ದೊಡ್ಡ ಪ್ರಕರಣಗಳಲ್ಲಿ ಇದು ಕೂಡಾ ಒಂದಾಗಿದ್ದು, ಪ್ರಕರಣವನ್ನ ಜಿಲ್ಲಾ ಪೊಲೀಸರು ಚಾಲೆಂಜ್ ಆಗಿ ಸ್ವೀಕರಿಸಿದ್ದು, ಆದಷ್ಟು ಬೇಗ ಖದೀಮರು ಅಂದರ್ ಆಗೋ ಸಾಧ್ಯತೆ ಇದೆ.
Laxmi News 24×7