ದೊಡ್ಡಬಳ್ಳಾಪುರ: ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿ ಅರ್ಕಾವತಿ ನದಿ ಹೋರಾಟ ಸಮಿತಿ ವಿನೂತನ ಪ್ರತಿಭಟನೆ ಮೂಲಕ ಗಮನ ಸೆಳೆದಿದೆ.
ಕೆರೆಯ ದಂಡೆಯ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯ ಪ್ರತಿಕೃತಿಗೆ ಹಾಲು, ತುಪ್ಪ ಮತ್ತು ಗಂಧದ ಅಭಿಷೇಕ ಮಾಡುವ ಮೂಲಕ ಗ್ರಾಮಸ್ಥರಿಗೆ ಶುದ್ಧ ನೀರು ಪೂರೈಸುವಂತೆ ಪ್ರತಿಭಟನೆ ಮಾಡಿದರು
ದೊಡ್ಡಬಳ್ಳಾಪುರ ತಾಲೂಕು ಚಿಕ್ಕತುಮಕೂರು ಕೆರೆಯ ದಂಡೆಯ ಮೇಲೆ ಅಭಿಷೇಕ ಮತ್ತು ಪೂಜಾ ಕಾರ್ಯಕ್ರಮವನ್ನು ಅರ್ಕಾವತಿ ನದಿ ಹೋರಾಟ ಸಮಿತಿ ಆಯೋಜನೆ ಮಾಡಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಭಾಸ್ಕರ್ ಅವರ ಪ್ರತಿಕೃತಿ ಮಾಡಿದ ಹೋರಾಟಗಾರರು, ಹಾಲು, ತುಪ್ಪ ಮತ್ತು ಗಂಧದ ಅಭಿಷೇಕ ಮಾಡಿದರು. ಗ್ರಾಮಸ್ಥರ ಮೇಲೆ ಕರುಣೆ ತೋರಿ ಜನರಿಗೆ ಶುದ್ಧ ನೀರು ಗಾಳಿ ಕೊಡು ಎಂದು ಅಧಿಕಾರಿಯ ಪ್ರತಿಕೃತಿಗೆ ಪೂಜೆ ಮಾಡಿದರು.
ದೊಡ್ಡಬಳ್ಳಾಪುರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಬೆಂಗಳೂರಿನ ಪೀಣ್ಯಾದಲ್ಲಿದೆ. ಕಚೇರಿಯನ್ನು ದೊಡ್ಡಬಳ್ಳಾಪುರಕ್ಕೆ ಶಿಫ್ಟ್ ಮಾಡುವಂತೆ ಕಳೆದ ನಾಲ್ಕು ವರ್ಷಗಳಿಂದ ಅರ್ಕಾವತಿ ನದಿ ಹೋರಾಟ ಸಮಿತಿ ಹೋರಾಟ ಮಾಡುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಭಾಸ್ಕರ್ ಅವರಿಗೆ ಕಚೇರಿಯ ಕೀ ನೀಡಿದ ಜಿಲ್ಲಾಧಿಕಾರಿಗಳಾದ ಬಸವರಾಜು ಅವರು ಶಿಫ್ಟ್ ಆಗುವಂತೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಮಾತಿಗೂ ಬೆಲೆ ಕೊಡದ ಭಾಸ್ಕರ್ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಮಾತನಾಡಿದ ಹೋರಾಟಗಾರರಾದ ಸತೀಶ್, ದೊಡ್ಡಬಳ್ಳಾಪುರ ಪ್ರವಾಸಿ ಮಂದಿರಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಶಿಫ್ಟ್ ಮಾಡುವಂತೆ ಭಾಸ್ಕರ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ ಭಾಸ್ಕರ್ ಅವರು ಕಚೇರಿಯಲ್ಲಿ ಮಹಿಳಾ ಸಿಬ್ಬಂದಿ ಇದ್ದಾರೆ, ಪ್ರವಾಸಿ ಮಂದಿರದಲ್ಲಿ ಶೌಚಾಲಯ ಇಲ್ಲವೆಂದು ಹೇಳಿ ಕಚೇರಿ ಶಿಫ್ಟ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಭಾಸ್ಕರ್ ಅವರಿಗೆ ಬಡಿದಿರುವ ಅಜ್ಞಾನವನ್ನು ಹೋಗಲಾಡಿಸುವ ಸಲುವಾಗಿ ಪೂಜಾ ಕಾರ್ಯಕ್ರಮದ ಮೂಲಕ ಪ್ರತಿಭಟನೆ ಮಾಡಿದ್ದಾಗಿ ಹೇಳಿದರು.
Laxmi News 24×7