ಕಾರುಗಳ ನಡುವೆ ಭೀಕರ ಅಪಘಾತ – ಇಬ್ಬರು ಸಾವು
ದಾವಣಗೆರೆ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಅಸುನೀಗಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಶಿಕಾರಿಪುರ ರಸ್ತೆಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಶಿಕಾರಿಪುರ ನಗರದ ರುದ್ರಮ್ಮ(79) ಹಾಗೂ ಶಿವಮೊಗ್ಗದ ಅನ್ಸರ್ ಅಹ್ಮದ್ ಎಂಬ ಇಬ್ಬರು ಸಾವನ್ನಪ್ಪಿದ್ದಾರೆ.
ರುದ್ರಮ್ಮ ಅವರು ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶಿಕಾರಿಪುರಕ್ಕೆ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಅವರಿದ್ದ ಕಾರಿಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಇತರ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ನ್ಯಾಮತಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತ್ಯೇಕ ಘಟನೆ – ಲಾರಿ ಪಲ್ಟಿಯಾಗಿ ಕಾರ್ಮಿಕ ಸಾವು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಶುಕ್ರವಾರ ಬೆಳಗ್ಗೆ ಅಕ್ಕಿ ಲಾರಿ ಪಲ್ಟಿಯಾಗಿ ಕಾರ್ಮಿಕನೊರ್ವ ಮೃತಪಟ್ಟಿದ್ದಾರೆ. ಜಾರ್ಖಂಡ್ ಮೂಲದ ನಿರ್ಮಲಾ ಅನ್ಸ್ತಾ (32) ಮೃತಪಟ್ಟ ಕಾರ್ಮಿಕ. ಘಟನೆಯಲ್ಲಿ, ಲಾರಿ ಚಾಲಕ ಸುಜಿತ್, ಕ್ಲೀನರ್ ಸಿ. ಮೋಹನ್ ಅವರು ಅಪಾಯದಿಂದ ಪಾರಾಗಿದ್ದಾರೆ.
ಉಡುಪಿಯಿಂದ ಅಕ್ಕಿ ತುಂಬಿಕೊಂಡು ಹೊರಟ ಲಾರಿಯು ಬಂಟ್ವಾಳದ ಎಸ್.ವಿ.ಎಸ್.ಕಾಲೇಜು ಬಳಿ ಬರುವ ವೇಳೆ ಮಳೆ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ. ಮೂಡಬಿದಿರೆಯ ಮೂಲಕ ಬಂಟ್ವಾಳಕ್ಕೆ ತೆರಳುವ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಕಿ ಲೋಡ್ನ ಮೇಲೆ ಕುಳಿತುಕೊಂಡಿದ್ದ ಕಾರ್ಮಿಕ ಲಾರಿ ಪಲ್ಟಿಯಾದ ಸಂದರ್ಭದಲ್ಲಿ ರಸ್ತೆಗೆ ಎಸೆಯಲ್ಟಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Laxmi News 24×7