ಬೆಂಗಳೂರು: ಪ್ರತಿ ಬಾರಿಯೂ ಮಳೆ ಅಬ್ಬರಿಸಿದಾಗ ನಗರದ ಹೆಚ್ಬಿಆರ್ ಲೇಔಟ್ನ ಹಲವಾರು ಪ್ರದೇಶಗಳು ಪ್ರವಾಹ ವಲಯಗಳಂತೆ ಮಾರ್ಪಡುತ್ತವೆ. ಇತ್ತೀಚೆಗೆ ಸುರಿದ ಭಾರಿ ಮಳೆಯ ಸಂದರ್ಭದಲ್ಲೂ ಇದು ಭಿನ್ನವಾಗಿರಲಿಲ್ಲ. ಧಾರಾಕಾರ ವರ್ಷಧಾರೆಗೆ ಚರಂಡಿಗಳು ತುಂಬಿ ಹರಿದಿದ್ದು, ಬೀದಿಗಳು ಜಲಾವೃತವಾಗಿದ್ದವು. ಮನೆಗಳಿಗೆ ನೀರು ನುಗ್ಗಿದ್ದರಿಂದ ಬಿಬಿಎಂಪಿ ಹಾಗೂ ಗುತ್ತಿಗೆದಾರರ ಪುನರಾವರ್ತಿತ ನಿರ್ಲಕ್ಷ್ಯ ಮತ್ತು ಕಳಪೆ ಕಾಮಗಾರಿಯ ವಿರುದ್ಧ ನಿವಾಸಿಗಳು ಆಕ್ರೋಶ ಹೊರಹಾಕಿದರು.
ಇಲ್ಲಿನ ಮೂರನೇ ಬ್ಲಾಕ್ ಮಾಟೇಕರ್ ಬೀದಿ, ಫಾರೆಸ್ಟ್ ಪಾರ್ಕ್ ಬಳಿಯ 4ನೇ ಬ್ಲಾಕ್, 5ನೇ ಬ್ಲಾಕ್ ಹೆಣ್ಣೂರು ಗ್ರಾಮ, ನಾಗವಾರ ಪ್ರದೇಶ (ಕೆಇಬಿ ಹಿಂದೆ) ಮತ್ತು ಆರೋಗ್ಯ ಅಮ್ಮ ಲೇಔಟ್ಗಳಲ್ಲಿ ಮಳೆಯಿಂದ ಭಾರಿ ಹಾನಿ ಸಂಭವಿಸಿದೆ. ಹೆಚ್ಬಿಆರ್ 2ನೇ ಹಂತದಲ್ಲಿ, ಅದರಲ್ಲೂ 6 ಮತ್ತು 7ನೇ ಕ್ರಾಸ್ನಲ್ಲಿ ರಸ್ತೆಗಳು ಮಳೆ ನೀರು ತುಂಬಿಕೊಂಡು ಕೆರೆಗಳಂತಾಗಿದ್ದವು.
ಮಳೆಗಾಲದಲ್ಲಿ ನೈರ್ಮಲ್ಯ ವ್ಯವಸ್ಥೆ ಇಲ್ಲದೆ, ಮನೆಗಳಿಗೆ ಕೊಳಚೆ ನೀರು ನುಗ್ಗಿ, ಕಸ ಮತ್ತು ಕೊಳಕು ವಾಸನೆಯಲ್ಲಿ ಬದುಕುವಂತಾಗಿದೆ. ಅನೇಕ ಕುಟುಂಬಗಳು ತಮ್ಮ ಮನೆಗಳನ್ನು ತೊರೆದು, ಬೇರೆಡೆ ಆಶ್ರಯ ಪಡೆಯಬೇಕಾದ ಅನಿವಾರ್ಯತೆ ಇದೆ.
ಈ ಬಗ್ಗೆ ಸಾರ್ವಜನಿಕರು ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. “ನಾವು ಹಲವು ವರ್ಷಗಳಿಂದಲೂ ದೂರು ನೀಡುತ್ತಲೇ ಇದ್ದೇವೆ. ಬಿಬಿಎಂಪಿಗೆ ಹಣ ಬರುತ್ತದೆ, ಆದರೆ ಆ ಹಣ ಭ್ರಷ್ಟಾಚಾರದಲ್ಲಿ ಕಳೆದುಹೋಗುತ್ತದೆ. ನಮಗೆ ಸಿಗುವುದು ಕಳಪೆ ಗುಣಮಟ್ಟದ ಕಾಮಗಾರಿ, ಅದು ಒಂದು ಋತುವಿಗೂ ಬಾಳಿಕೆ ಬರುವುದಿಲ್ಲ” ಎಂದು ಸ್ಥಳೀಯ ನಿವಾಸಿಗಳ ಕಲ್ಯಾಣ ಸಂಘದ ಸದಸ್ಯ ನಿರಂಜನ್ ಆಕ್ರೋಶ ಹೊರಹಾಕಿದರು.
Laxmi News 24×7