ರಾಯಚೂರು: ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ರಾಯಚೂರಿನ ಶಕ್ತಿನಗರದಲ್ಲಿ ಶುಕ್ರವಾರ ಸಂಜೆ 4.34 ರಿಂದ 4.39ರವರೆಗೆ ತುರ್ತು ಪರಿಸ್ಥಿತಿ ಎಚ್ಚರಿಕೆಯ ಸೈರನ್ ಮೊಳಗಿಸಲಾಯಿತು.
ಶಕ್ತಿನಗರದ ವಿದ್ಯುತ್ ಶಾಖೋತ್ಪನ್ನ ಕೇಂದ್ರದ ಹೆಲಿಪ್ಯಾಡ್ ಕೇಂದ್ರ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಕೆ.ಪಿ.ಟಿ.ಸಿ.ಎಲ್, ಸಿ.ಐ.ಎಸ್.ಎಫ್ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಗರಿಕ ರಕ್ಷಣಾ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಮೂರು ವಿಧದ ಸೈರನ್ಗಳು ಕೇಳಿಸಿದವು. ತುರ್ತು ಪರಿಸ್ಥಿತಿಯಲ್ಲಿ ಮೊದಲ ಸೈರನ್, ಎರಡನೇ ಸೈರನ್, ಮೂರನೇ ಸೈರನ್ ಸಂದರ್ಭದ ಬಗ್ಗೆ ತಿಳಿಸಲಾಯಿತು.
ಈ ವೇಳೆ ಸೈರನ್ಗೆ ಹೇಗೆ ಪ್ರತಿಕ್ರಿಯಿಸಬೇಕು, ವಾಯುದಾಳಿ ಆದರೆ ಏನು ಮಾಡಬೇಕು, ಬೆಂಕಿ ಹತ್ತಿಕೊಂಡಾಗ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವುದು ಹೇಗೆ, ಅವಶೇಷಗಳ ಅಡಿ ಸಿಲುಕಿದವರನ್ನು, ಎತ್ತರದ ಪ್ರದೇಶಗಳಲ್ಲಿರುವವರನ್ನು ಹೇಗೆ ರಕ್ಷಿಸಬೇಕು, ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸುವುದು ಹೇಗೆ ಎಂಬುದನ್ನು ಕಲಿಸಲಾಯಿತು.
ಸೈರನ್ ಮೊಳಗಿದ ಕೂಡಲೇ ನಾಗರಿಕರು ಕೈಗೊಳ್ಳಬೇಕಾದ ಎಚ್ಚರಿಕೆ ಹಾಗೂ ದುರ್ಘಟನೆಯಿಂದ ಕಟ್ಟಡಗಳಲ್ಲಿ ಸಿಲುಕಿರುವ ನಾಗರಿಕರನ್ನು ಸುಸಜ್ಜಿತವಾದ ಏರಿಯಲ್ ಲ್ಯಾಡರ್ ವಾಹನದ ಮೂಲಕ ರಕ್ಷಣೆ ಮಾಡುವುದನ್ನು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಸಿಬ್ಬಂದಿ ಪ್ರದರ್ಶಿಸಿದರು.
Laxmi News 24×7