ಶಿರಸಿ(ಉತ್ತರ ಕನ್ನಡ): ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶಿರಸಿಯ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ ಪೂರ್ಣಾಂಕ (625) ಪಡೆದು ವಿಶೇಷ ಸಾಧನೆ ತೋರಿದ್ದಾರೆ. ಒಟ್ಟು ಫಲಿತಾಂಶದಲ್ಲಿ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆ ರಾಜ್ಯದಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ.
ಬಿಹಾರ ಮೂಲದ ಶಗುಫ್ತಾ ಐದು ವರ್ಷಗಳಿಂದ ಶಿರಸಿಯ ಸರ್ಕಾರಿ ಉರ್ದು ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈಕೆ ಬಿಹಾರದಲ್ಲಿ ಮೌಲ್ವಿಯಾಗಿ ಕಾರ್ಯನಿರ್ವಹಿಸಿದ್ದ ಮೌಲಾನಾ ಅವರ ಪುತ್ರಿ. ಕೆಲಸದ ನಿಮಿತ್ತ ನಗರದ ಹೊರವಲಯದ ಟಿಪ್ಪು ನಗರದಲ್ಲಿ ಇವರ ಕುಟುಂಬ ವಾಸವಿದೆ.
ಶಗುಫ್ತಾ ಮಾತನಾಡಿ, “ನನಗೆ ಶಾಲೆಯ ಶಿಕ್ಷಕ ವೃಂದದಿಂದ ಸಾಕಷ್ಟು ಬೆಂಬಲ ಸಿಕ್ಕಿದೆ. ರಂಜಾನ್ ಸಮಯದಲ್ಲಿಯೂ ವಿಶೇಷ ತರಗತಿ ತೆಗೆದುಕೊಂಡು ಮಾರ್ಗದರ್ಶನ ನೀಡಿದ್ದರು. ಕಠಿಣ ಪರಿಶ್ರಮವೇ ಸಾಧನೆಗೆ ಮೂಲ. ಭವಿಷ್ಯದಲ್ಲಿ ವೈದ್ಯೆಯಾಗುವ ಆಸೆಯಿದೆ” ಎಂದರು.
ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿ ತನುಶ್ರೀ ನರಸಿಂಹ ಜೋಶಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಸಿದ್ದಾಪುರ ತಾಲೂಕಿನ ಕಾವಂಚೂರಿನ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ವಿದ್ಯಾರ್ಥಿ ಭೂಮಿಕಾ ಸುರೇಶ ಒಕ್ಕಲಿಗ ಕೂಡ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ 15ಕ್ಕೂ ಅಧಿಕ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಉತ್ತಮ ಅಂಕ ಸಾಧನೆ ಮಾಡಿದ್ದಾರೆ.
Laxmi News 24×7