ಬೀದರ್: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ರ್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು.
ಇಲ್ಲಿನ ಜಾಮಾ ಮಸೀದಿಯಿಂದ ಆರಂಭವಾದ ರ್ಯಾಲಿ ಗವಾನ್ ಚೌಕ್ ಮೂಲಕ ಡಾ.ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಅಲ್ಲಿ ಸಮಾವೇಶಗೊಂಡಿತು.
ಈ ವೇಳೆ ಹಲವರು ಮಾತನಾಡಿ, ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ. ಕೇಂದ್ರ ಸರ್ಕಾರ ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕುಗಳಿಗೆ ಬೆದರಿಕೆ ಒಡ್ಡುತ್ತಿದೆ. ಈ ಕಾಯ್ದೆಯನ್ನು ದೇಶದ ಹಲವು ಸಮುದಾಯಗಳ ಜನರು ತಿರಸ್ಕರಿಸುತ್ತಿದ್ದಾರೆ ಎಂದರು.
ವಕ್ಫ್ ತಿದ್ದುಪಡಿ ಇಸ್ಲಾಂ ಧಾರ್ಮಿಕ ಮೌಲ್ಯಗಳು, ಸಾಂಸ್ಕೃತಿಕ ಸ್ವಾತಂತ್ರ್ಯ ಮತ್ತು ಕೋಮು ಸಾಮರಸ್ಯದ ಮೇಲಿನ ತೀವ್ರ ದಾಳಿ ಇದಾಗಿದೆ. ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮತ್ತು ಮುಸ್ಲಿಂ ಸಮುದಾಯವನ್ನು ದುರ್ಬಲಗೊಳಿಸುವ ಯತ್ನ ಕೇಂದ್ರ ಮಾಡುತ್ತಿದೆ ಎಂದು ಆರೋಪಿಸಿದರು.
ವಕ್ಫ್ ಆಸ್ತಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ಈ ತಿದ್ದುಪಡಿ ಮಾಡಲಾಗಿದೆ. ವಕ್ಫ್ ಆಸ್ತಿಗಳು ಶತಮಾನಗಳಿಂದ ಮುಸ್ಲಿಮರ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಉನ್ನತಿಗೆ ಐತಿಹಾಸಿಕವಾಗಿ ಬೆಂಬಲ ನೀಡಿವೆ. ಅವುಗಳನ್ನು ಇದೀಗ ದುರ್ಬಲಗೊಳಿಸಲಾಗಿದೆ. ಇದರ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು. ಇದು ಮುಸ್ಲಿಂರಿಗೆ ಮಾತ್ರವಲ್ಲ, ಕಾನೂನಿನಲ್ಲಿ ನಂಬಿಕೆ ಇರುವ ಎಲ್ಲರಿಗೆ ಬೆದರಿಕೆ ಆಗಿದೆ ಎಂದು ದೂರಿದರು.
ತಿದ್ದುಪಡಿ ಕಾಯ್ದೆಯನ್ನು ತಿರಸ್ಕರಿಸುವ ಮೂಲಕ ವಕ್ಫ್ ಆಸ್ತಿಗಳ ರಕ್ಷಣೆ ಮತ್ತು ಎಲ್ಲ ಸಮುದಾಯಗಳಿಗೆ ಧಾರ್ಮಿಕ ಸ್ವಾಯತ್ತತೆಯ ಸಂರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನಂತರ ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಸಲ್ಲಿಸಲಾಯಿತು.
ಇದೇ ವೇಳೆ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ಜೊತೆಗೆ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಪೌರಾಡಳಿತ ಸಚಿವ ರಹೀಮ್ಖಾನ್, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸೊದ್ದೀನ್, ಮಂಡಳಿಯ ಡಾ.ಅಬ್ದುಲ್ ಖದೀರ್, ಸರ್ಫರಾಜ್ ಹಾಸ್ಮಿ, ಡಾ.ಶಹಾ ಜಿಯಾ ಉಲ್ ಇಸ್ಲಾಂ, ಮನ್ಸೂರ್ ಅಹ್ಮದ್ ಖಾದ್ರಿ, ಎಂ.ಡಿ. ಮುನೀಶ್ ಕಿರ್ಮಾನಿ, ಮಹ್ಮದ್ ಯುಸುದ್ದೀನ್, ಮೌಲಾನಾ ಸಿರಾಜೊದ್ದೀನ್, ಎಂ.ಡಿ. ನಿಜಾಮೊದ್ದೀನ್, ನಬಿ ಖುರೇಷಿ, ಇರ್ಷಾದ್ ಪೈಲ್ವಾನ್, ಪ್ರಮುಖರಾದ ಮಾರುತಿ ಬೌದ್ಧೆ, ಬಾಬು ಪಾಸ್ವಾನಿ, ಸಂಜಯ್ ಜಾಗೀರದಾರ್, ಮಹೇಶ್ ಗೋರನಾಳಕರ್, ವಿನಯ್ ಮಾಳಗೆ, ರಮೇಶ್ ಸಾಗರ್, ಶಿವಕುಮಾರ್ ನೀಲಿಕಟ್ಟಿ, ಪ್ರಕಾಶ್ ರಾವಣ, ಕೃಷ್ಣಾ ಭೂತಾಳೆ ಸೇರಿದಂತೆ ಹಲವರು ಹಾಜರಿದ್ದರು.
Laxmi News 24×7