ಎರಿಮಲೈ/ಹಾವೇರಿ: ಕೇರಳ ರಾಜ್ಯದ ಎರಿಮಲೈ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹಾವೇರಿ ಜಿಲ್ಲೆಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಹಾನಗಲ್ ಪಟ್ಟಣದ 51 ವರ್ಷದ ಮಾರುತಿ ಎಂ ಹರಿಹರ ಎಂದು ಗುರುತಿಸಲಾಗಿದೆ.
ಕೇರಳ ರಾಜ್ಯದಲ್ಲಿರುವ ಶಬರಿಮಲೆಗೆ ಹಾವೇರಿ ಜಿಲ್ಲೆಯಿಂದ 25 ಪ್ರಯಾಣಿಕರು ತೆರಳಿದ್ದರು. ಯಾತ್ರೆಗೆ ತೆಗೆದುಕೊಂಡಿದ್ದ ಮಿನಿ ಬಸ್ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಮಾರುತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 10 ಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ. 20 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹಾನಗಲ್ ತಾಲ್ಲೂಕಿನ ಹಿರೇಕಣಗಿ ಸೇರಿದಂತೆ ಹಾನಗಲ್ ತಾಲೂಕಿನ ವಿವಿಧ ಗ್ರಾಮಗಳ ಅಯ್ಯಪ್ಪ ಸ್ವಾಮಿಯ 25 ಭಕ್ತರು ಕೇರಳಕ್ಕೆ ತೆರಳಿದ್ದರು. ಅಯ್ಯಪ್ಪಭಕ್ತರು ಮಿನಿ ಬಸ್ ಮಾಡಿಕೊಂಡು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಅಪಘಾತ ನಡೆದಿದ್ದು ಗುರುಸ್ವಾಮಿಯಾಗಿದ್ದ ಮಾರುತಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗಾಗಿ ಕೇರಳ ಸರ್ಕಾರದ ಜೊತೆ ರಾಜ್ಯ ಸರ್ಕಾರ ಮನವಿ ಮಾಡಿದೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
Laxmi News 24×7