ಬೆಳಗಾವಿ: ಯತ್ನಾಳ್ ತಾಂತ್ರಿಕವಾಗಿ ಪಕ್ಷದಿಂದ ಉಚ್ಛಾಟನೆ ಆಗಿರಬಹುದು. ಆದರೆ, ಈಗಲೂ ಅವರು ನಮ್ಮ ತಂಡದಲ್ಲೇ ಇದ್ದಾರೆ. ಮಾತಿನ ಬರದಲ್ಲಿ ಏನೇನೋ ಮಾತನಾಡುತ್ತಾರೆ ಅಷ್ಟೇ. ಯಾರಿಗೂ ಕೆಟ್ಟದ್ದು ಬಯಸುವ ಉದ್ದೇಶ ಅವರಿಗಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಕುರಿತು ರಾಜ್ಯದ ಜನರಿಗೆ ಮಾಹಿತಿ ಸಿಗಲಿ ಅಂತಾ ಮಾತನಾಡುತ್ತಿದ್ದೇನೆ. ಯತ್ನಾಳ್ಗೆ ಪದೇ ಪದೇ ಮನವಿ ಮಾಡಿಕೊಳ್ಳುತ್ತಿದ್ದೇನೆ. ಯಾರನ್ನೂ ಬಯ್ಯಬೇಡಿ, ಪಕ್ಷಕ್ಕೆ ಮುಜುಗರ ಆಗುವಂತೆ ಮಾಡಬೇಡಿ ಎಂದು ಮನವಿ ಮಾಡಿದ್ದೇನೆ
ಎಂದರು.ನಮ್ಮ ಮಾತಿಗೆ ಯತ್ನಾಳ್ ಸ್ಪಂದಿಸುವ ವಿಶ್ವಾಸ ಇದೆ. ಅದು ಅವರ ಹುಟ್ಟು ಗುಣ. ಕೆಲವೊಂದು ಸಲ ಮಾತನಾಡುತ್ತಾರೆ. ಅವರು ಮಾತನಾಡುವುದೇ ಬೇರೆ. ಅದು ಟ್ವಿಸ್ಟ್ ಆಗಿ ಬಿಡುತ್ತದೆ. ಕೇಂದ್ರದ ನಾಯಕರ ಆದೇಶದ ಮೇರೆಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟಿದ್ದರು. ಅದೇ ರೀತಿ ಲಿಂಗಾಯತ ಸಮುದಾಯಕ್ಕೆ ಒಬಿಸಿ ಮೀಸಲಾತಿ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ನಿರ್ಧಾರ ಆಗಬೇಕು. ಮರಾಠಾ, ಜಾಟ್ ಸಮುದಾಯಗಳು ಬೇಡಿಕೆ ಇಟ್ಟಿವೆ ಎಂದು ಕೇಂದ್ರದ ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದರು.
ಇದನ್ನೇ ಯಡಿಯೂರಪ್ಪ ಹೇಳಿದ್ದರು. ಹಾಗಾಗಿ, ನಿನ್ನೆ ಹುಬ್ಬಳ್ಳಿಯಲ್ಲಿ ಯಡಿಯೂರಪ್ಪನವರ ಬಗ್ಗೆ ಯತ್ನಾಳ್ ಮಾತಾಡಿದ್ದು ತಪ್ಪು. ಅವರು ಹೇಳಿದ ಅರ್ಥ ಬೇರೆ ಇದೆ. ತಪ್ಪು ಕಲ್ಪನೆ ಬೇಡ ಎಂದು ಹೇಳಿದರು.ಯತ್ನಾಳ್ ಬೇರೆ ಪಕ್ಷ ಕಟ್ಟುವ ಚರ್ಚೆ ಮತ್ತು ಬಿಜೆಪಿ ನಾಯಕರನ್ನು ಟೀಕಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ಬೇರೆ ಪಕ್ಷ ಏನಿಲ್ಲ. ಬಿಜೆಪಿ ನಾಯಕರನ್ನು ಬೈಯುತ್ತಿಲ್ಲ. ಒಂದೇ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ತಂದೆ ಮತ್ತು ಪೂಜ್ಯ ಮಗನ ಬಗ್ಗೆ ಮಾತನಾಡಬೇಡ ಎಂದು ಹೇಳಿದ್ದೇನೆ. ಸಂಘಟನೆ ಮಾಡು, ಅದನ್ನ ಬಿಟ್ಟು ಬೇರೆ ವಿಚಾರ ಮಾತನಾಡಬೇಡ ಎಂದು ಮನವಿ ಮಾಡಿದ್ದೇನೆ ಎಂದರು.
Laxmi News 24×7