ದಂಪತಿಗಳ ಸಾವಿನಿಂದ ಅಂಧಕಾರದಲ್ಲಿ ಮುಳುಗಿದ ನಾಲ್ಕು ಮಕ್ಕಳ ಭವಿಷ್ಯ
ಆ ದಂಪತಿಗಳಿಗೆ ನಾಲ್ಕು ಪುಟಾಣಿ ಮಕ್ಕಳು. ಹೊಲಕ್ಕೆ ಹೋದವರು ಶವವಾಗಿ ಪತ್ತೆಯಾಗಿದ್ದಾರೆ. ಪತಿಯ ಶವ ಮರದಲ್ಲಿ ನೇತಾಡುತ್ತಿದ್ದರೇ, ಇತ್ತ ಇಪ್ಪತ್ತು ಮೀಟರ್ ದೂರದಲ್ಲಿ ಪತ್ನಿ ಶವ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೌಟುಂಬಿಕ ಕಾರಣ ಹಿನ್ನೆಲೆಯಲ್ಲಿ ಪತಿಯೇ ಕೊಲೆ ಮಾಡಿ ತಾನು ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಆದ್ರೆ ಪತ್ನಿಯ ತವರಿನವರು ಇದೊಂದು ಕೊಲೆ ಎಂದು ದೂರು ದಾಖಲಿಸಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.
ಪತ್ನಿಯನ್ನು ಕೊಂದು ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಗೆದ್ದಲಮರಿಯಲ್ಲಿ ನಡೆದಿದೆ. ಇನ್ನೂ ಮನೆಯವರ ಕಿರುಕುಳ ತಾಳಲಾರದೆ ಪತಿಯೊರ್ವ ತನ್ನ ಪತ್ನಿಯನ್ನು ಕೊಂದು ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕುರಿತು ಶಂಕೆ ವ್ಯಕ್ತವಾಗಿದೆ.
ಮೃತರನ್ನು ಮೇಘಾ ಉರ್ಫ್ ಮಾನಮ್ಮ ಹರನಾಳ (ಹೊಸಮನಿ) (28), ಸಿದ್ದಪ್ಪ ಮಲ್ಲಪ್ಪ ಹರನಾಳ (33) ಎನ್ನಲಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ, ಬಸವನ ಬಾಗೇವಾಡಿ ಡಿಎಸ್ಪಿ ಬಲ್ಲಪ್ಪ ನಂದಗಾಂವಿ, ಮುದ್ದೇಬಿಹಾಳ ಸಿಪಿಐ ಮೆಹಮೂದ ಫಸಿಯುದ್ದೀನ್, ಪಿಎಸೈ ಸಂಜಯ್ ತಿಪ್ಪರಡ್ಡಿ ಭೇಟಿ ನೀಡಿ ತನಿಖೆ ಕೈಕೊಂಡರು. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ, ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನೂ ಇಬ್ಬರ ಸಾವಿನ ಕುರಿತು ಮೇಘಾಳ ತವರು ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ. ಕೊಲೆಗೀಡಾದ ಮೇಘ ಅವರ ತಾಯಿ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕು ಎಣ್ಣಿ ವಡಿಗೇರಿ ಗ್ರಾಮದ ಗದ್ದೆಮ್ಮ ಬಸಪ್ಪ ಹೊಸಮನಿ ಅವರು ನೀಡಿದ ದೂರಿನಲ್ಲಿ ತನ್ನ ಮಗಳು ಹಾಗೂ ಅಳಿಯ(ಸಿದ್ದಪ್ಪ) ನ ಆತನ ಸಹೋದರ ಶ್ರೀಕಾಂತ ಮಲ್ಲಪ್ಪ ಹರನಾಳ, ಸಿದ್ದಪ್ಪನ ತಾಯಿ ಶಾಂತಮ್ಮ ಮಲ್ಲಪ್ಪ ಹರನಾಳ ಇವರೆ ಕೊಲೆ ಮಾಡಿದ್ದಾರೆ ಎಂದು ಮೃತ ಸಿದ್ದಪ್ಪನ ಕುಟುಂಬದ ವಿರುದ್ಧ ಮುದ್ದೇಬಿಹಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಟ್ನಲ್ಲಿ ದಂಪತಿಗಳ ಸಾವಿನಿಂದ ನಾಲ್ಕು ಪುಟಾಣಿ ಮಕ್ಕಳ ಜೀವನ ಹಾಗೂ ಭವಿಷ್ಯ ಮಂಕಾಗಿ ಹೋಗಿದೆ. ಇನ್ನೂ ದಂಪತಿಗಳ ಸಾವಿನ ಕುರಿತು ಪೊಲೀಸರ ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.
Laxmi News 24×7