Breaking News

ರಾಮನಗರ ಜಿಲ್ಲೆಯ ಹೆಸರು ಬದಲಾಯಿಸುವುದು ಶತಸಿದ್ಧ,:ಡಿ.ಕೆ.ಶಿ

Spread the love

ಬೆಂಗಳೂರು/ದೆಹಲಿ: “ರಾಮನಗರ ಜಿಲ್ಲೆಯ ಹೆಸರನ್ನು ‘ಬೆಂಗಳೂರು ದಕ್ಷಿಣ’ ಎಂದು ಬದಲಾವಣೆ ಮಾಡುವುದು ಶತಸಿದ್ಧ. ಹೇಗೆ ಹೆಸರು ಬದಲಾಯಿಸಬೇಕು ಎಂಬುದು ನಮಗೆ ಗೊತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರಕಾರ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಪ್ರಸ್ತಾಪವನ್ನು ತಡೆಹಿಡಿದಿರುವ ಕುರಿತು ಬುಧವಾರ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, “ಜಿಲ್ಲೆಯ ಹೆಸರು ಬದಲಾವಣೆ ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ವಿಚಾರ. ನಮಗೂ ಕಾನೂನು ಗೊತ್ತಿದೆ” ಎಂದರು.

“ಇಲ್ಲಿ ಒಂದಷ್ಟು ಸಚಿವರು ಇದ್ದಾರಲ್ಲಾ, ಅವರುಗಳು ಕೇಂದ್ರ ಗೃಹ ಸಚಿವರಿಗೆ ಹೇಳಿ ಹೆಸರು ಬದಲಾವಣೆ ಬೇಡ ಎಂದು ಬರೆಸಿದ್ದಾರೆ” ಎಂದರು. ಇದಕ್ಕೆ ಅವರು ಕುಮಾರಸ್ವಾಮಿಯೇ? ಎಂದು ಮಾಧ್ಯಮದವರು ಮರುಪ್ರಶ್ನಿಸಿದಾಗ, ‘ಇನ್ನ್ಯಾರು?’ ಎಂದು ಹೆಸರು ಹೇಳದೆ ಛೇಡಿಸಿದರು.

“ಈ ವಿಚಾರವಾಗಿ ಎಲ್ಲಾ ಇಲಾಖೆಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದವು. ಹಾಗೆ ನೋಡಿದರೆ ಜಿಲ್ಲೆಯ ಹೆಸರು ಬದಲಾವಣೆಗೆ ಕೇಂದ್ರ ಸರಕಾರದ ಅನುಮತಿಯ ಅವಶ್ಯಕತೆಯೇ ಇಲ್ಲ” ಎಂದು ಡಿಕೆಶಿ ತಿಳಿಸಿದರು.

“ಜನರ ಹೆಸರು ಬದಲಾವಣೆ ಮಾಡುವಾಗ ಒಂದು ಅಫಿಡವಿಟ್ ಮಾಡಿ ಬದಲಾಯಿಸಬಹುದಾದರೆ ಒಂದು ಜಿಲ್ಲೆಯ ಹೆಸರು ಬದಲಾಯಿಸುವುದು ಕಷ್ಟವೇ?. ಅಷ್ಟಕ್ಕೂ ಇದು ರಾಜ್ಯದ ವಿಷಯ. ದ್ವೇಷದ ರಾಜಕಾರಣ ಹೇಗೆ ನಡೆಯುತ್ತಿದೆ ಮತ್ತು ರಾಮನಗರ ಜನತೆಯ ಮೇಲೆ ನಡೆಸುತ್ತಿರುವ ಗದಾ‌ಪ್ರಹಾರಕ್ಕೆ ಇವೆಲ್ಲವೂ ಸಾಕ್ಷಿ” ಎಂದರು.

ಎಐಸಿಸಿ ಕಚೇರಿಗೆ ಭೇಟಿ ನೀಡಿರುವ ಕುರಿತ ಪ್ರಶ್ನೆಗೆ, “ದೆಹಲಿಗೆ ಬಂದಾಗಲೆಲ್ಲಾ ಪಕ್ಷದ ದೇವಾಲಯ ಎಐಸಿಸಿ ಕಚೇರಿಗೆ ಭೇಟಿ ನೀಡುತ್ತೇನೆ” ಎಂದು ಹೇಳಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ