ಬೆಂಗಳೂರು : ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟವು ಮಾ.22ರಂದು ಕರೆ ನೀಡಿರುವ ಕರ್ನಾಟಕ ಬಂದ್ಗೆ ಬೆಂಬಲವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಮಾರ್ಚ್ ತಿಂಗಳಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಬಂದ್ ಅವಶ್ಯಕತೆಯಿಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರೊಂದಿಗೆ ಮಾತನಾಡುವೆ. ಹೀಗಾಗಿ ಬಂದ್ಗೆ ಸರ್ಕಾರ ಬೆಂಬಲಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಪರಿಷತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಬಂದ್ ಸಂಬಂಧ ಸದನದಲ್ಲಿ ಮೇಲ್ಮನೆಯ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣ ಅವರು ಪ್ರಸ್ತಾಪಿಸಿದರು. ಕನ್ನಡ ಒಕ್ಕೂಟ ಮಾ.22ರಂದು ಬಂದ್ಗೆ ಕರೆಕೊಟ್ಟಿದೆ. ಇದೇ ದಿನ ಎಸ್ಸೆಸ್ಸೆಲ್ಸಿ ಸೇರಿದಂತೆ ವಿವಿಧ ತರಗತಿ ಮಕ್ಕಳಿಗೆ ಪರೀಕ್ಷೆ ನಿಗದಿಯಾಗಿದೆ. ಹೀಗಾಗಿ ಸರ್ಕಾರವು ಬಂದ್ಗೆ ಅನುವು ಮಾಡಿಕೊಡಲಿದೆಯಾ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮನವಿ ಮಾಡಿದರು.
ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ, ಮಾ.22ರಂದು ಕರ್ನಾಟಕ ಬಂದ್ ಮಾಡುವ ಅವಶ್ಯಕತೆಯಿಲ್ಲ. ಮುಖ್ಯವಾಗಿ ಮಾರ್ಚ್ ತಿಂಗಳಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷೆ ನಿಗದಿಯಾಗಿದೆ. ಬಂದ್ ಮಾಡದಂತೆ ನ್ಯಾಯಾಲಯ ಸಹ ಆದೇಶ ನೀಡಿದೆ. ಹೀಗಾಗಿ ಸರ್ಕಾರ ಬಂದ್ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದರು.
ಮಾ.22ರಂದು ವಿಶ್ವ ಜಲದಿನವಾಗಿರುವುದಿಂದ ಜಲಸಂಪನ್ಮೂಲ ಇಲಾಖೆಯಿಂದ ಒಂದು ವಾರ ಕಾಲ ನೀರಿನ ರಕ್ಷಣೆ ಬಗ್ಗೆ ಅಭಿಯಾನ ಕೈಗೊಳ್ಳುವ ಬಗ್ಗೆ ಸಿದ್ಧತೆ ನಡೆಸಲಾಗುತ್ತಿದೆ. ಬಂದ್ ಬಗ್ಗೆ ಸಂಬಂಧಪಟ್ಟವರನ್ನು ಕರೆದು ತಿಳುವಳಿಕೆ ಮೂಡಿಸುತ್ತೇವೆ ಎಂದರು.
Laxmi News 24×7