ಬೆಂಗಳೂರು, ಜೂ.3- ಅಟಲ್ ಭೂ ಜಲ ಯೋಜನೆಯಡಿ ಅಂತರ್ಜಲ ಅಭಿವೃದ್ಧಿ ಯೋಜನೆಗೆ 1203 ಕೋಟಿ ರೂ. ಒದಗಿಸಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 14 ಜಿಲ್ಲೆಗಳಲ್ಲಿನ 41 ತಾಲ್ಲೂಕಿಗೆ ಈ ಹಣ ಒದಗಿಸಿದ್ದು, ನಾಲ್ಕು ವರ್ಷದಲ್ಲಿ ವೆಚ್ಚ ಮಾಡಬೇಕು. ಕೇಂದ್ರ ಸರ್ಕಾರದ ಈ ಅನುದಾನದ ಜತೆಗೆ ರಾಜ್ಯ ಸರ್ಕಾರದ ನೆರವು ಮತ್ತು ನರೇಗಾ ಯೋಜನೆಯನ್ನು ಬಳಸಿಕೊಳ್ಳಬಹುದು ಎಂದರು.
ಅಂತರ್ಜಲ ಚೇತನ, ಅಟಲ್ ಭೂ ಜಲ ಸೇರಿ ಮೂರ್ನಾಲ್ಕು ಯೋಜನೆಗಳಿದ್ದು, ಅವುಗಳನ್ನು ಕ್ರೋಢೀಕರಿಸಲು ಚಿಂತನೆ ನಡೆಸಲಾಗಿದೆ. ನೀರಿನ ಉಳಿತಾಯ, ಅಂತರ್ಜಲ ಅಭಿವೃದ್ಧಿ ಹೇಗೆ ಮಾಡುವುದು, ಯಾವ ಹಳ್ಳ ಎಲ್ಲಿಂದ ಎಲ್ಲಿಗೆ ಹರಿಯುತ್ತಿದೆ ಎಂಬ ಮಾಹಿತಿ ಪಡೆಯಲಾಗುವುದು. ಈಗಾಗಲೇ ರಾಜ್ಯದಲ್ಲಿ ಅಂತರ್ಜಲ 1500 ಅಡಿ ಆಳಕ್ಕೆ ಕುಸಿದಿದೆ
ಮಳೆಗಾಲದಲ್ಲೂ ನೀರು ನಿಲ್ಲುತ್ತಿಲ್ಲ ಎಂದ ಅವರು, ಅರಣ್ಯೀಕರಣ, ಮೀನುಗಾರಿಕೆ, ಕೃಷಿ ತೋಟಗಾರಿಕೆ, ಸಣ್ಣ ನೀರಾವರಿ ಸೇರಿ ಎಲ್ಲವನ್ನೂ ಸೂಕ್ತವಾಗಿ ಬಳಸಿಕೊಳ್ಳುತ್ತೇವೆ ಎಂದರು.ಕೃಷಿಗೆ ನೀರಿನ ಮಿತವ್ಯಯ ಮಾಡುವುದು ಮತ್ತು ನೀರಿನ ಮರು ಬಳಕೆ ಬಗ್ಗೆ ಪ್ರಯೋಗ ಮಾಡಲಾಗುವುದು. ಅರಣ್ಯ ಬಳಸಿ ಕಡಿಮೆ ನೀರನ್ನು ಬಳಕೆ ಮಾಡಲಾಗುತ್ತದೆ.
ಈ ಪ್ರಾಯೋಗಿಕ ಯೋಜನೆಗೆ ವಿಶ್ವ ಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೆ, ಎಲ್ಲ ಇಲಾಖೆಗಳೂ ಬಳಕೆ ಮಾಡಿರುವುದಕ್ಕೆ ಸಂತೋಷವಾಗಿದೆ. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ಚಿಂತಿಸಲಾಗಿದೆ ಎಂದರು. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಗದಗ, ಬಾಗಲಕೋಟೆ, ಹಾಸನ ಜಿಲ್ಲೆಗಳು ಆಯ್ಕೆಯಾಗಿದ್ದು, 1119 ಗ್ರಾಪಂಗಳು ಈ ಯೋಜನೆಗೆ ಆಯ್ಕೆಯಾಗಿವೆ ಎಂದರು.