ಬೆಂಗಳೂರು/ ಗ್ರಾಹಕ ನ್ಯಾಯಾಲಯಕ್ಕೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದರೆ, ಗೋಕಾಕ್ ಜಾತ್ರೆ ಬಂದೋಬಸ್ತ್ಗೆ ಬಂದಿದ್ದ ಹುಬ್ಬಳ್ಳಿ ಎಎಸ್ಐ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಶನಿವಾರ ನಡೆದಿದೆ.
ಕನಕಪುರ ಮೂಲದ ಚಿನ್ನಾರಿ ಗೌಡ (65) ಗ್ರಾಹಕರ ನ್ಯಾಯಾಲಯದಲ್ಲಿ ಮೃತಪಟ್ಟ ವ್ಯಕ್ತಿ. ಶಾಂತಿ ನಗರದ ಬಿಎಂಟಿಸಿ ಸಂಕೀರ್ಣದ ಮೊದಲ ಮಹಡಿಯಲ್ಲಿರುವ ಗ್ರಾಹಕರ ನ್ಯಾಯಾಲಯಕ್ಕೆ ಇಂದು ಮುಂಜಾನೆ ಚಿನ್ನಾರಿ ಗೌಡ ಹಾಜರಾಗಿದ್ದರು. ಬೆಳಗ್ಗೆ 10.30ರ ಸುಮಾರಿಗೆ ಕುಳಿತಿದ್ದಲ್ಲೇ ಅವರು ಕುಸಿದು ಬಿದ್ದಿದ್ದರು.
ಅವರನ್ನು ಕೂಡಲೇ ಸ್ಥಳದಲ್ಲಿದ್ದವರ ನೆರವಿನಿಂದ ಜಯನಗರ 9ನೇ ಹಂತದಲ್ಲಿರುವ ಜಯದೇವ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿನ್ನಾರಿ ಗೌಡ ಮೃತಪಟ್ಟಿದ್ದಾರೆ. ಈ ಕುರಿತಂತೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ವರದಿಯಾಗಿದೆ.
ಎಎಸ್ಐ ಹೃದಯಾಘಾತದಿಂದ ಸಾವು: ಮತ್ತೊಂದೆಡೆ ಬೆಳಗಾವಿಯ ಗೋಕಾಕ್ ಲಕ್ಷ್ಮೀ ದೇವಿ ಜಾತ್ರೆಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಎಎಸ್ಐ ಒಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂದು ನಡೆದಿದೆ. ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆಯ ಎಎಸ್ಐ ಲಾಲಸಾಬ್ ಮೀರಾ ನಾಯಕ್ ಮೃತರು.
ಗೋಕಾಕ್ ಪಟ್ಟಣದ ಎಸ್ಸಿ/ಎಸ್ಟಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯವಿದ್ದ ವೇಳೆಯೇ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ತಕ್ಷಣವೇ ಸಹೋದ್ಯೋಗಿಗಳು ಹಾಗೂ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರು. ಆದರೆ, ಅಷ್ಟರೊಳಗೆ ಅವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಬಳಿಕ ಹುಬ್ಬಳ್ಳಿಗೆ ತೆಗೆದುಕೊಂಡು ಹೋಗಲಿದ್ದಾರೆ ಎಂದು ಗೋಕಾಕ್ ಪೊಲೀಸರು ತಿಳಿಸಿದ್ದಾರೆ.