ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಯಾರದೇ ಅಪ್ಪಣೆಯ ಅವಶ್ಯಕತೆಯಿಲ್ಲ. ನಮ್ಮ ನಾಡಿನಲ್ಲಿ ” ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಗೊತ್ತುವಳಿ ಪಾಸು ಮಾಡಬೇಕೆಂಬ ಕನ್ನಡ ಸಂಘಟನೆಗಳ ಒತ್ತಾಯಕ್ಕೆ ಸಹಮತವಿದೆ. ಈ ಕುರಿತು ಚರ್ಚಿಸಲು ಶೀಘ್ರವೇ ಮಹಾಪೌರರು, ಉಪಮಾಹಾಪೌರರು ಮತ್ತು ಕನ್ನಡ ಸಂಘಟನೆಗಳ ಸಭೆ ಕರೆಯುವುದಾಗಿ ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದ್ದಾರೆ.
ಮಂಗಳವಾರ ಸಂಜೆ ಗೋಕಾಕ ನಗರದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾರೆಡ್ಡಿ ಹುಚ್ಚರೆಡ್ಡಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಬೆಳಗಾವಿ ಪಾಲಿಕೆಯ ಸಂಬಂಧ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಈ ಭರವಸೆ ನೀಡಿದರು.
ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರಕ್ಕೆ ಆಗ್ರಹಿಸಿ ಕಳೆದ ಮಾರ್ಚ್ 26 ರಿಂದ ಕನ್ನಡ ಪರ ಸಂಘಟನೆಗಳು ನಡೆಸಿರುವ ಹೋರಾಟ ಹಾಗೂ ಮಹಾಪೌರರು ಮತ್ತು ಉಪ ಮಹಾಪೌರರು ತಾವು ನೀಡುತ್ತ ಬಂದ ಭರವಸೆಯಂತೆ ನಡೆದುಕೊಳ್ಳದೆ ಕನ್ನಡಿಗರಿಗೆ ಬಗೆದ ದ್ರೋಹದ ಬಗ್ಗೆ ಶಿವಾರೆಡ್ಡಿ ಅವರು ಜಾರಕಿಹೊಳಿ ಅವರಿಗೆ ವಿವರಿಸಿದರು.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ಉಪಾಧ್ಯಕ್ಷ ಸಿಡ್ಲಿಂಗಪ್ಪ ಸಂಕುಪ್ಪಿ, ಲಕ್ಷ್ಮಣ ಮಳ್ಳಿಗಿರಿ, ಅಜೀಜ್ ಮೊಕಾಶಿ, ಭಾಗ್ಯಶ್ರೀ ಪಾಟೀಲ,ಮಹಾದೇವಿ ಹುಡೇದ, ಶಬಾನಾ ಬೋಗುರ, ತಬಸಂ ಮಾವಿನಕಟ್ಟಿ, ಉತ್ತಮ ಸಹನವಲೆ, ಕೃಷ್ಣ ಮಾವರಕರ, ಗಜಾನನ ಹಾಗೂ ದಯಾನಂದ ಘೆವಡೆ ಉಪಸ್ಥಿತರಿದ್ದರು.
Laxmi News 24×7