Breaking News

ಕಾಂಗ್ರೆಸ್‌ಗೆ ಬಿಗ್ ಶಾಕ್ – ಜಾರಕಿಹೊಳಿ ಆಪ್ತ, ಕುರುಬ ಸಮುದಾಯದ ಪ್ರಭಾವಿ ಮುಖಂಡ ಸದಾಶಿವ ದೇಶಿಂಗೆ ಬಿಜೆಪಿಗೆ ಸೇರ್ಪಡೆ

Spread the love

ಬೆಂಗಳೂರು: ಬೆಳಗಾವಿ  ಜಿಲ್ಲೆಯ ಪ್ರಭಾವಿ ನಾಯಕ, ಕೆಎಂಎಫ್ ಮಾಜಿ ನಿರ್ದೇಶಕ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕುರುಬ ಸಮುದಾಯದ  ಹಿರಿಯ ಮುಖಂಡ ಸದಾಶಿವ ದೇಶಿಂಗೆಅವರು ಕಾಂಗ್ರೆಸ್ ತೊರೆದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದೇಶಿಂಗೆ ಅವರಿಗೆ ಪಕ್ಷದ ಬಾವುಟ ನೀಡಿ, ಹೆಗಲಿಗೆ ಕಂಬಳಿ ಹೊದೆಸುವ ಮೂಲಕ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಶಾಸಕರಾದ ಬೈರತಿ ಬಸವರಾಜು, ದುರ್ಯೋಧನ ಐಹೊಳೆ, ಬಸವರಾಜ ಮತ್ತಿಮಾಡು ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಮಾತನಾಡಿದ ಬಿ.ವೈ. ವಿಜಯೇಂದ್ರ, ಸದಾಶಿವ ದೇಶಿಂಗೆ ಅವರಿಗೆ ಕುರುಬ ಸಮಾಜದಲ್ಲಿ ತಮ್ಮದೇ ಆದ ದೊಡ್ಡ ಶಕ್ತಿ ಇದೆ. ರಾಯಭಾಗ ಸೇರಿದಂತೆ ಬೆಳಗಾವಿ ಭಾಗದಲ್ಲಿ ಅಪಾರ ಪ್ರಭಾವ ಹೊಂದಿರುವ ಅವರು ಬಿಜೆಪಿಗೆ ಬಂದಿರುವುದರಿಂದ ಉತ್ತರ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಹೇಳಿದರು.

ಹಾಲುಮತ ಸಮಾಜವು ಪ್ರಾಮಾಣಿಕತೆ ಮತ್ತು ಸ್ವಾಭಿಮಾನಕ್ಕೆ ಹೆಸರಾಗಿದೆ. ಈ ಸಮಾಜಕ್ಕೆ ಬಿಜೆಪಿ ಎಂದಿಗೂ ಅನ್ಯಾಯ ಮಾಡಿಲ್ಲ. ಕನಕದಾಸ ಜಯಂತಿಗೆ ಸರ್ಕಾರಿ ರಜೆ ಘೋಷಿಸಿದ್ದು ಖುದ್ದು ಬಿ.ಎಸ್. ಯಡಿಯೂರಪ್ಪನವರು. ಅಷ್ಟೇ ಅಲ್ಲದೇ, ಈ ಹಿಂದೆ ವಿಜಯ್ ಶಂಕರ್ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ ಅವರಿಗೆ ಎಂಎಲ್ಸಿ ಸ್ಥಾನ ನೀಡಿ, ಸಚಿವರನ್ನಾಗಿ ಮಾಡಿದ್ದು ಇದೇ ಯಡಿಯೂರಪ್ಪನವರು ಎಂದು ನೆನಪಿಸಿಕೊಂಡರು.

2019ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಮತ್ತು ಯಡಿಯೂರಪ್ಪನವರು ( ಸಿಎಂ ಆಗಲು ಹಾಲುಮತ ಸಮುದಾಯದ ನಾಯಕರ ತ್ಯಾಗ ದೊಡ್ಡದಿದೆ. ಅಂದು ಸಚಿವರಾಗಿದ್ದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದ ಬೈರತಿ ಬಸವರಾಜು ಮತ್ತು ಎಂಟಿಬಿ ನಾಗರಾಜ್ ಅವರ ತ್ಯಾಗವನ್ನು ಬಿಜೆಪಿ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಕೇಂದ್ರದ ನರೇಂದ್ರ ಮೋದಿ ಸರ್ಕಾರದಲ್ಲಿ ಒಬಿಸಿ ಸಮುದಾಯದ 27 ಜನ ಸಚಿವರಾಗಿದ್ದಾರೆ. ಖುದ್ದು ಪ್ರಧಾನಿ ಮೋದಿಯವರೇ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್‌ನವರು ಸದಾ ಅವರ ಮೇಲೆ ಮತ್ಸರದಿಂದ ಟೀಕೆ ಮಾಡುತ್ತಿರುತ್ತಾರೆ. ರಾಜ್ಯದ ಸದ್ಯದ ರಾಜಕೀಯ ಸ್ಥಿತಿಯನ್ನು ಟೀಕಿಸಿದ ವಿಜಯೇಂದ್ರ, “ರಾಜ್ಯದಲ್ಲಿ ಸದ್ಯ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿ ಬಂದಿದೆ. ಜನರೇ ಈ ಸರ್ಕಾರಕ್ಕೆ ಬುದ್ಧಿ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸತೀಶ್ ಜಾರಕಿಹೊಳಿ ಅವರ ಕೋಟೆಯಾಗಿದ್ದ ಬೆಳಗಾವಿ ಭಾಗದಲ್ಲೇ ಪ್ರಭಾವಿ ನಾಯಕನನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಿಜೆಪಿ, ಮುಂಬರುವ ದಿನಗಳಲ್ಲಿ ಗಡಿ ಜಿಲ್ಲೆಯಲ್ಲಿ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ ನೀಡಿದೆ.


Spread the love

About Laxminews 24x7

Check Also

ಬೈಕ್‌ಗೆ ಸೈಡ್ ಕೊಡುವಾಗ ‌ಕಾಫಿ ತೋಟಕ್ಕೆ ಉರುಳಿದ ಕಾರು – ಐವರಿಗೆ ಗಾಯ

Spread the loveಚಿಕ್ಕಮಗಳೂರು: ಬೈಕ್‌ಗೆ ಸೈಡ್ ಕೊಡುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು  ಕಾಫಿ ತೋಟಕ್ಕೆ ನುಗ್ಗಿ, ಪಲ್ಟಿಯಾಗಿರುವ  ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ