ಉಡುಪಿ: ಬಾರ್ಕೂರಿನ ಚೌಳಿಕೆರೆಗೆ ಕಾರು ಉರುಳಿ ಬಿದ್ದು ಸ್ಥಳೀಯ ಉದ್ಯಮಿ ಸಂತೋಷ್ ಶೆಟ್ಟಿ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರ ಜೊತೆಗಿದ್ದ ಸಂಸ್ಥೆಯ ಉದ್ಯೋಗಿ ಶ್ವೇತಾ ಅಪಘಾತದಿಂದ ಬಚಾವಾಗಿದ್ದೇ ಒಂದು ಪವಾಡ. ಆದರೆ, ಈ ಪವಾಡ ನಡೆದದ್ದು ಹೇಗೆ ಅನ್ನೋದು ತಡವಾಗಿ ಬೆಳಕಿಗೆ ಬಂದಿದೆ. ನೀರು ತುಂಬಿದ್ದ ಕೆರೆಗೆ ಕಾರು ಬಿದ್ದಾಗ ಇಬ್ಬರೂ ಮುಳುಗಿದ್ದರು. ಸಂತೋಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಯುವತಿಯ ಪ್ರಾಣವಾಯು ಇನ್ನೂ ಉಳಿದಿತ್ತು. ಬಾಲಕಿಯೊಬ್ಬಳ ಸಮಯ ಪ್ರಜ್ಞೆಯಿಂದ ಶ್ವೇತಾ ಬದುಕಿ ಬಂದಿದ್ದಾಳೆ. ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಯುವತಿ ಕೊನೆಗೂ ಬಚಾವಾಗಿದ್ದಾಳೆ. ಅವಳನ್ನು ಬದುಕಿಸಿದ್ದು ನಮನ ಎನ್ನುವ ಬಾಲಕಿ. ಶ್ವೇತಾಳನ್ನು ಮೇಲಕ್ಕೆ ಎತ್ತಿದ ತಕ್ಷಣ ಎದೆಗೆ ಒತ್ತಡ ಹಾಕಿ ಚೇತರಿಸಿಕೊಳ್ಳುವಂತೆ ಮಾಡಿದ್ದಾಳೆ. ಪ್ರಾಥಮಿಕ ಚಿಕಿತ್ಸೆ ನೀಡಿ ಉಸಿರು ಮರಳುವಂತೆ ಮಾಡಿದ ಈಕೆಯ ಸಾಹಸ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ. ಲಿಟಲ್ರಾಕ್ ಶಾಲೆಯಲ್ಲಿ 10 ತರಗತಿ ಕಲಿಯುತ್ತಿರುವ ನಮನ ಬಹಳ ಚುರುಕಿನ ಹುಡುಗಿ. ಹಿರಿಯ ಉಪನ್ಯಾಸಕಿ, ಎನ್ಎಸ್ಎಸ್ ಅಧಿಕಾರಿ ಸವಿತಾ ಯೆರ್ಮಿನಾಳ ಮತ್ತು ಕುಮಾರ್ ಅವರ ಮಗಳು. ನೀರು ಕುಡಿದು ಜೀವಚ್ಛವದಂತಾಗಿದ್ದ ಆ ಯುವತಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ನಮನ ಇನ್ನೂ 15 ವರ್ಷದ ಬಾಲಕಿ. ಯುವತಿಯ ಉಸಿರಾಟಕ್ಕೆ ತೊಂದರೆಯಾಗಿದ್ದ ನೀರನ್ನು ಪ್ರಥಮ ಚಿಕಿತ್ಸೆ ಮೂಲಕ ಹೊರ ಹಾಕಿದ ಬಳಿಕವೇ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಪ್ರಥಮ ಚಿಕಿತ್ಸೆ ನೀಡಿದ್ದಲ್ಲದಿದ್ದರೆ ಜೀವಕ್ಕೇ ಅಪಾಯ ಇತ್ತು ಎಂದು ವೈದ್ಯರು ಹೇಳಿದ್ದರು. ಚಿಕಿತ್ಸೆ ನೀಡಿದ ವೈದ್ಯರೂ ನಮನಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Laxmi News 24×7