ತುಮಕೂರು: ತುಂಬೆ ಊರನ್ನು, ತುಮಕೂರಿನ ಚರಿತ್ರೆ ಅಳಿಸಿ ಹಾಕಲು ಹೊರಟಿದ್ದಾರೆ. ಇದರ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾ ಇದೆ ಎಂದು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಕಿಡಿಕಾರಿದ್ದಾರೆ.
ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂದು ಘೋಷಣೆ ಮಾಡುವ ವಿಚಾರದ ಕುರಿತು ಹೆಸರು ಬದಲಾವಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತುಮಕೂರನ್ನು ಬೆಂಗಳೂರು ಉತ್ತರ ಎಂದು ಘೋಷಣೆ ಮಾಡಲು ಜಿ.ಪರಮೇಶ್ವರ್ ಕೇಳಿಕೊಂಡಿದ್ದಾರೆ. ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಈ ಹೇಳಿಕೆ ಕೊಟ್ಟಿದ್ದಾರೆ. ತುಮಕೂರಿಂದ ನೀವು ಡಿಸಿಎಂ ಆಗಿದ್ದೀರಿ, ಕೆಪಿಸಿಸಿ ಅಧ್ಯಕ್ಷರಾಗಿದ್ದೀರಿ. ಸಿಎಂ ಆಗಲು ಒಂದೇ ಒಂದು ಮೆಟ್ಟಿಲು ಇದೆ. ನಿಮಗೆ ಇವೆಲ್ಲಾ ಕೊಟ್ಟಿದ್ದು ತುಮಕೂರು ಹೊರತು ಬೆಂಗಳೂರು ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿದ್ದಗಂಗಾ ಮಠ ಇರುವ ಈ ಸಂತನ ನಾಡನ್ನು ಕಲ್ಪತರು ನಾಡನ್ನು ಬೆಂಗಳೂರಿಗೆ ಸೇರಿಸಲು ಹೊರಟಿರೋದು ತಪ್ಪು. ಯಾಕೆ ಈ ಕೇಡು ಬುದ್ಧಿ ಬಂತು ಗೊತ್ತಾಗಿಲ್ಲ. ತುಮಕೂರಿನ ಹೆಸರನ್ನು ಹಾಳು ಮಾಡಲು ನಾವು ಬಿಡಲ್ಲ ಎಂದು ಹರಿಹಾಯ್ದರು.
Laxmi News 24×7