ಬೆಂಗಳೂರು: ಕಾಂಗ್ರೆಸ್ ಗುಂಡಾವರ್ತನೆ ತೋರಿಲ್ಲ. ಬಿಜೆಪಿಯವರೇ ನಿಯಮಾವಳಿ ಪಾಲಿಸದೇ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿ ಗೂಂಡಾಗಿರಿಯನ್ನು ಸದನದಲ್ಲಿ ಪ್ರದರ್ಶಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ.
ವಿಧಾನಪರಿಷತ್ ನಲ್ಲಿನ ಗಲಾಟೆಯ ಕುರಿತಂತೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಇಂದಿನ ವಿಧಾನ ಪರಿಷತ್ ನಲ್ಲಿನ ಗಲಾಟೆಯ ಬಗ್ಗೆ ವಿಷಾದಿಸುತ್ತೇನೆ. ಆದ್ರೆ ಸಭಾಪತಿ ಇದ್ದಾಗ ಉಪಸಭಾಪತಿ ಹೇಗೆ ಬಂದ್ರು.? ಸಭಾಪತಿ ಬರುವ ಮೊದಲೇ ಉಪಸಭಾಪತಿ ಪೀಠ ಅಲಂಕಿರಿಸಿದ್ದೇಕೆ ಎಂದು ಪ್ರಶ್ನಿಸಿದ್ರು.
ಅವಿಶ್ವಾಸ ನಿರ್ಣಯ ನೋಟಿಸ್ ಕ್ರಮಬದ್ಧವಾಗಿರಲಿಲ್ಲ. ನೋಟಿಸ್ ತಿರಸ್ಕರಿಸುವ ಅಧಿಕಾರ ಸ್ಪೀಕರ್ ಗೆ ಇದೆ. ಕ್ರಮ ಬದ್ಧವಾಗಿರದಂತ ನೋಟಿಸ್ ಅನ್ನು ಸ್ಪೀಕರ್ ತಿರಸ್ಕರಿಸಿದ್ದಾರೆ. ನಿಯಮಾವಳಿ ಪ್ರಕಾರ ಕಲಾಪ ನಡೆಯಬೇಕು. ಹೀಗಿದ್ದರು ಇದ್ಯಾವುದನ್ನು ಇಂದಿನ ಕಲಾಪದಲ್ಲಿ ಪಾಲಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮೋಷನ್ ರಿಜೆಕ್ಟ್ ಆದ ಮೇಲೆ ಸಭಾಪತಿ ಕೂರುವ ಬದಲಾಗಿ, ಉಪ ಸಭಾಪತಿಯನ್ನು ಕೂರಿಸಿದ್ದು ಬಿಜೆಪಿ. ಇದು ಕಾನೂನು ಬಾಹಿರ ಅಪರಾಧವಾಗಿದೆ. ಸಭಾಪತಿ ಬರಬಾರದು ಎಂಬುದಾಗಿ ಬಾಗಿಲು ಕೂಡ ಹಾಕಿದ್ದು ಬಿಜೆಪಿ ಗುಂಡೂಗಿರಿ ಅಲ್ವಾ.? ಇಂದಿನ ಅಜೆಂಡಾದಲ್ಲಿ ಅವಿಶ್ವಾಸ ನಿರ್ಣಯವೇ ಇರಲಿಲ್ಲ. ಅಜೆಂಡಾದಲ್ಲಿ ಎಲ್ಲಾ ಕಲಾಪಗಳು ಮುಗಿದಿವೆ. ಹೀಗಿದ್ದೂ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಮುಂದಾಗಿತ್ತು ಎಂದು ಕಿಡಿ ಕಾರಿದರು.