ಅಥಣಿ ಗ್ರಾಮೀಣ: ಗ್ರಾಮಗಳ ಅಭಿವೃದ್ಧಿ ಕಾಮಗಾರಿ ಯಶಸ್ವಿಯಾಗಬೇಕಾದರೆ, ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ಜಿಪಂ ವತಿಯಿಂದ ಹಮ್ಮಿಕೊಂಡಿದ್ದ 1.45 ಕೋಟಿ ರೂ. ವೆಚ್ಚದ ರಸ್ತೆ, ಸಮುದಾಯ ಭವನ ನಿರ್ಮಾಣ ಹಾಗೂ ಕಟ್ಟಡ ಅಡಿಗಲ್ಲು ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಜನರ ಜೀವನಮಟ್ಟ ಉತ್ತಮಗೊಳಿಸುವುದರ ಜತೆಗೆ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನಿರ್ಮಿಸುವುದೇ ನಿಜವಾದ ಅಭಿವೃದ್ಧಿಯಾಗಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಎಲ್ಲೆಡೆ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಸೌಹಾರ್ದ ಕಾಪಾಡುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದರು.
ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ. ವಿಶೇಷ ಅನುದಾನ ಮಂಜೂರಾಗಿದೆ. ಈ ಅನುದಾನದಲ್ಲಿ 4 ಪ್ರಮುಖ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆ ಮೂಲಕ, 22 ಸಂಪರ್ಕ ರಸ್ತೆಗಳನ್ನು ಪಂಚಾಯತ್ ರಾಜ್ ಅಭಿವೃದ್ಧಿ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಮುಖಂಡ ಗುರುಬಸು ತೇವರಮನಿ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದಲ್ಲಿ ಸವಳು-ಜವಳು ಕಾಮಗಾರಿಯಷ್ಟೇ ಅಲ್ಲದೇ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದರ ಜತೆಗೆ ಬಡಮಕ್ಕಳ ಕಲಿಕೆಗಾಗಿ ಎಲ್ಕೆಜಿ-ಯುಕೆಜಿಯಿಂದ ಪಿಯುಸಿವರೆಗೆ ಆಂಗ್ಲ ಮಾಧ್ಯಮ ಶಾಲೆಗಳನ್ನು ತಂದಿರುವುದು ಶ್ಲಾಘನೀಯ ಎಂದರು.
ಪಿಕೆಪಿಎಸ್ ಅಧ್ಯಕ್ಷ ವಿಠ್ಠಲ ರಾಚಗೌಡರ, ಮುರಗೆಪ್ಪ ಮದಲಮಟ್ಟಿ, ನಾಗರಾಜ ಗೂಳಪ್ಪನವರ, ಅಪ್ಪಾಸಾಬ ಠಕ್ಕಣ್ಣವರ, ಹನುಮಂತ ಸತ್ತಿಗೌಡರ, ರಾವಸಾಬ ರಾಚಗೌಡರ, ಸಂಗಪ್ಪ ಠಕ್ಕಣ್ಣವರ, ಈಶ್ವರ ಮುಜಗುಣಿ, ಅಪ್ಪಸಾಬ ಮಧಬಾವಿ, ಪರಗೊಂಡ ಪಾಟೀಲ, ಪ್ರಮೋದ ಕುಲಕರ್ಣಿ, ಜಿಪಂ ಎಇಇ ವೀರಪ್ಪ ವಾಲಿ, ಅಭಿಯಂತ ಅರವಿಂದ ಬೇವಿನಗಿಡದ ಇತರರಿದ್ದರು.
Laxmi News 24×7