ರಾಯಚೂರು: ಗ್ರಾಮೀಣ ಭಾಗದ ಮಕ್ಕಳಿಗೆ ವರದಾನವಾಗಿದ್ದ ವಿದ್ಯಾಗಮ ಯೋಜನೆಯನ್ನು ಕೊರೊನಾ ಅಬ್ಬರದ ನಡುವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಅತ್ತ ಮಕ್ಕಳು ಮತ್ತು ಅವರಿಗೆ ಪಾಠ ಮಾಡ್ತಿದ್ದ ಶಿಕ್ಷಕರಿಗೆ ಕಂಟಕವಾಗಿದ್ದ ಯೋಜನೆಗೆ ಬ್ರೇಕ್ ಹಾಕಲಾಯ್ತು ಎಂದು ಹಲವರು ಸಂತಸಪಡುತ್ತಿದ್ದರೇ ಇತ್ತ ಗ್ರಾಮೀಣ ಭಾಗದ ಮಕ್ಕಳಿಗೆ ಇದೀಗ ಮತ್ತೊಂದು ತಲೆನೋವು ಶುರುವಾಗಿದೆ.
ನಿತ್ಯ 250 ರೂಪಾಯಿ ಕೂಲಿ ಕಾಸಿನ ಆಸೆಗೆ
ಹೌದು, ವಿದ್ಯಾಗಮ ಯೋಜನೆ ತಾತ್ಕಾಲಿಕವಾಗಿ ಸ್ಥಗಿತವಾದ ಬೆನ್ನಲ್ಲೇ ವಠಾರ ಶಾಲೆಗಳು ಬಂದ್ ಆಗಿವೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದಲ್ಲಿ ಶಾಲಾ ಮಕ್ಕಳನ್ನ ಇದೀಗ ನಿತ್ಯವೂ ಕೂಲಿ ಕೆಲಸಕ್ಕೆ ಬಳಸಿಕೊಳ್ಳಲಾಗ್ತಿದೆ ಎಂಬುದು ಬೇಸರದ ಸಂಗತಿ.
ಚಿಕ್ಕ ಚಿಕ್ಕ ಮಕ್ಕಳನ್ನ ಗೂಡ್ಸ್ ವಾಹನಗಳಲ್ಲಿ ಅಕ್ರಮವಾಗಿ ಕೂಲಿ ಕೆಲಸಕ್ಕೆ ಸಾಗಿಸಲಾಗ್ತಿದ್ದು ಜಿಲ್ಲೆಯ ದೇವದುರ್ಗ, ಮಾನ್ವಿ ಹಾಗೂ ಸಿರವಾರ ತಾಲೂಕಿನ ವ್ಯಾಪ್ತಿಯಲ್ಲಿ ನಿತ್ಯವೂ ನೂರಾರು ಮಕ್ಕಳನ್ನ ಕೂಲಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಗೂಡ್ಸ್ ವಾಹನಗಳಲ್ಲಿ ಕುರಿಗಳ ಹಿಂಡಿನಂತೆ ಮಕ್ಕಳನ್ನ ತುಂಬಿ ಜಮೀನಿನಲ್ಲಿ ಕೂಲಿ ಕೆಲಸ ಮಾಡಲು ಕರೆದೊಯ್ಯಲಾಗುತ್ತಿರುವ ದೃಶ್ಯಾವಳಿ ಇದೀಗ ಜಿಲ್ಲೆಯಲ್ಲಿ ಸಾಮಾನ್ಯವಾಗಿಬಿಟ್ಟಿದೆ. ನಿತ್ಯ 250ರಿಂದ 300 ರೂಪಾಯಿ ಕೂಲಿ ಕಾಸಿನ ಆಸೆಗೆ ಚಿಕ್ಕ ಚಿಕ್ಕ ಮಕ್ಕಳನ್ನ ಅವರ ಪೋಷಕರು ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ.
ಅಧಿಕಾರಿಗಳು ಮಾತ್ರ ಮೌನಂ ಶರಣಂ ಗಚ್ಛಾಮಿ!
ಇನ್ನು ಇಷ್ಟೆಲ್ಲಾ ನಡೀತ್ತಿದ್ರೂ ಇದಕ್ಕೆಲ್ಲ ಕಡಿವಾಣ ಹಾಕಬೇಕಿರುವ ಕಾರ್ಮಿಕ ಇಲಾಖೆ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಮೌನಂ ಶರಣಂ ಗಚ್ಛಾಮಿ! ಇದನ್ನು ತಡೆಯಬಹುದಾದ ಅಧಿಕಾರಿಗಳೇ ಮೌನಕ್ಕೆ ಶರಣಾಗಿರೋದ್ದಕ್ಕೆ ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
14 ವರ್ಷದೊಳಗಿನ ಮಕ್ಕಳನ್ನ ಬಾಲ ಕಾರ್ಮಿಕರಾಗಿ ಬಳಸಿಕೊಳ್ಳುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಆದರೂ, ಚಿಕ್ಕ ಚಿಕ್ಕ ಮಕ್ಕಳನ್ನ ರಾಜಾರೋಷವಾಗಿ ಕೂಲಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಬಳಪ ಇರಬೇಕಾದ ಮಕ್ಕಳ ಕೈಯಲ್ಲಿ ಹಾರಿ, ಗುದ್ದಲಿ, ಸನಿಕೆ ಕಾಣುತ್ತಿರುವುದು ವಿಪರ್ಯಾಸವೇ ಸರಿ.