ಹಾವೇರಿ: ಸಿಎಂ ಯಡಿಯೂರಪ್ಪ ಅವರನ್ನ ಅಲ್ಲಾಡಿಸೋಕೆ ಯಾರಿಗೂ ಆಗೋದಿಲ್ಲ. ಬಿಎಸ್ವೈ ನೇತೃತ್ವದಲ್ಲಿ ಸರ್ಕಾರದ ಅಧಿಕಾರದ ಅವಧಿ ಪೂರ್ಣಗೊಳ್ಳುತ್ತದೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಯಡಿಯೂರಪ್ಪ ಅವರ ನೇತೃತ್ವದಲ್ಲೇ ನಡೆಯುತ್ತೆ. ಬಾಯಿ ಚಟಕ್ಕೆ, ನಾಲಿಗೆ ಚಟಕ್ಕೆ ಯಾರು ಯಾರೋ ಏನೇನೋ ಹೇಳ್ತಾರೆ. ಪ್ರಚಾರಕ್ಕಾಗಿ ಹೇಳೋರ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದರು.
ಪಕ್ಷದ ವಿರುದ್ಧ ಮಾತನಾಡಿರುವ ಬಗ್ಗೆ ಕ್ರಮಕೈಗೊಳ್ಳವುದು ಈಗ ಚುನಾವಣೆ ಇರುವುದರಿಂದ ಸ್ವಲ್ಪ ತಡವಾಗಿದೆ. ಈ ರೀತಿ ಮಾತನಾಡೋರ ಮೇಲೆ ಹೈ ಕಮಾಂಡ್ ಅವರು ಕ್ರಮ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಗೆ ಸೇರಿರುವ ಶಾಸಕರು ನಾಯಿ ಪಾಡಾಗ್ತಾರೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಗರಂ ಆದ ಸಚಿವರು, ಮನುಷ್ಯರನ್ನ ನಾಯಿ, ಬಂಡೆ, ಹುಲಿ, ಟಗರಿಗೆ ಹೋಲಿಸೋದು ಯಾವ ಸಂಸ್ಕೃತಿ. ಇದು ಸಿದ್ದರಾಮಯ್ಯನವರ ಸಂಸ್ಕೃತಿ ತೋರಿಸುತ್ತದೆ. ಯಡಿಯೂರಪ್ಪ ಸಿಎಂ ಆಗಿದ್ದಕ್ಕೆ ಸಿದ್ದರಾಮಯ್ಯ ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ. ಸಿದ್ದರಾಮಯ್ಯ ಯಾರದೋ ಹೆಸರಲ್ಲಿ ಮನೆ ತಗೊಂಡು, ಬೇನಾಮಿ ಹೆಸರಿನ ಮನೆಯಲ್ಲಿದ್ದರು. ವಿರೋಧ ಪಕ್ಷದ ಸ್ಥಾನ ಅಲ್ಲಾಡುತ್ತೆ ಅನ್ನೋ ಭಯದಿಂದ ಸಿದ್ದರಾಮಯ್ಯ ಈ ರೀತಿ ಮಾತನಾಡ್ತಿದ್ದಾರೆ. ಇಂಥಾ ಹೇಳಿಕೆಗಳು ಅವರ ಘನತೆಗೆ ತಕ್ಕುದಲ್ಲ. ನಾಯಿಗಳಿಗೆ ನಿಯತ್ತು ಇರುತ್ತೆ. ಅದು ಅವರಿಗೆ ಗೊತ್ತಿರಬೇಕು. ಸಿದ್ದರಾಮಯ್ಯ ಅವರಿಗೆ ಆ ಭಾಷೆ ಬಳಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಡಿಕೆಶಿ ನಮಗೆ ರಾಜಕೀಯ ಸಮಾಧಿ ಆಗ್ತಾರೆ ಅಂದ್ರು. ಸಿದ್ದರಾಮಯ್ಯ ಹಾಗೂ ಡಿಕೆಶಿ ತಿರುಕನ ಕನಸು, ಹಗಲುಕನಸು ಕಾಣೋದನ್ನ ಬಿಡಬೇಕು ಎಂದು ಪಾಟೀಲ್ ಕಿಡಿ ಕಾರಿದರು.