ಹೊಸದಿಲ್ಲಿ: ವಿರೋಧ ಪಕ್ಷದ ಭಾರೀ ಪ್ರತಿಭಟನೆಯ ನಡುವೆ ಇಂದು ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಅಂಗೀಕಾರವಾಗಿವೆ.
ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ ಪ್ರೋತ್ಸಾಹ ಮತ್ತು ನೆರವು ಮಸೂದೆ-2020 ಹಾಗೂ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020 ರ ಒಪ್ಪಂದ ಮಸೂದೆ ಯನ್ನು ಮಂಡಿಸಲಾಗಿದೆ.
ಮಸೂದೆ ಚರ್ಚೆ ವೇಳೆ, ಟಿಎಂಸಿ ಸಂಸದರಾದ ಡೆರೆಕ್ ಓ ಬ್ರಯನ್ ಹಾಗೂ ಇತರೆ ಕೆಲ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕೂಡ ಮಸೂದೆಯನ್ನ ವಿರೋಧಿಸಿ ಮಾತನಾಡಿ, ಕೊರೊನಾ ಸಾಂಕ್ರಾಮಿಕದ ನಡುವೆ ಈ ಮಸೂದೆಗಳನ್ನು ಅಂಗೀಕರಿಸಲು ಅವಸರವೇಕೆ? ಈ ಮಸೂದೆಗಳಿಂದ ರೈತ ಸಮುದಾಯಕ್ಕೆ ಏನು ಉಪಯೋಗ? ರೈತರ ಆದಾಯ ದ್ವಿಗುಣಗೊಳಿಸುವ ಸರ್ಕಾರದ ಉದ್ದೇಶವನ್ನ ಈಡೇರಿಸಿಕೊಳ್ಳಲು ಇದು ಹೇಗೆ ನೆರವಾಗುತ್ತದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ವಿವರಿಸಬೇಕು ಎಂದು ಹೆಚ್ಡಿಡಿ ಒತ್ತಾಯಿಸಿದರು.
ಭಾರೀ ಗದ್ದಲ, ಪ್ರತಿಭಟನೆ ನಡುವೆಯೂ ಎರಡು ಮಸೂದೆ ಅಂಗೀಕಾರಗೊಳಿಸಲಾಗಿದೆ.