ಚೆನ್ನೈ:ಎಣ್ಣೆ ಪಾರ್ಟಿಗೆ ಸೈಡ್ಸ್ ತರಲಿಲ್ಲ ಎಂದು ಸಿಟ್ಟಿಗೆದ್ದ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಕೊಲೆ ಮಾಡಿದ ಆರೋಪಿಯನ್ನು ವಾಸು(38) ಎಂದು ಗುರುತಿಸಲಾಗಿದ್ದು, ವಿನಯಗಂ(43) ಕೊಲೆಯಾದ ದುರ್ದೈವಿಯಾಗಿದ್ದಾನೆ. ತಮಿಳುನಾಡಿನ ಚೆಂಗಲ್ಪಟ್ಟುವಿನ ಗುಡುವಾಂಚೇರಿ ಪಟ್ಟಣದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ವಾಸು ಹಾಗೂ ವಿನಯಗಂ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ಹೂವು ಮಾರುವುದು, ಕ್ಯಾಬ್ ಓಡಿಸುವುದು ಹಾಗೂ ರಿಯಲ್ ಎಸ್ಟೇಟ್ ಬ್ರೋಕರ್ಸ್ ಆಗಿದ್ದರು. ಲಾಕ್ಡೌನ್ ಸಡಿಲಿಕೆ ಆಗಿ ಮದ್ಯ ಮಾರಾಟ ಆರಂಭವಾದ ಹಿನ್ನೆಲೆ ಇಬ್ಬರು ಜೊತೆ ಸೇರಿ ಎಣ್ಣೆ ಪಾರ್ಟಿ ಮಾಡಲು ನಿರ್ಧರಿಸಿದರು. ಆದ್ರೆ ಎಣ್ಣೆ ನಾನು ತರುತ್ತೇನೆ, ಸೈಡ್ಸ್ ಗೆ ಬಾತುಕೋಳಿ ಮಾಂಸ ತೆಗೆದುಕೊಂಡು ಬಾ ಎಂದು ವಾಸು ವಿನಯಗಂ ಬಳಿ ಹೇಳಿದ್ದನು.
ವಾಸು ಮದ್ಯ ತಂದ ತಕ್ಷಣ ಇಬ್ಬರೂ ತೋಟವೊಂದರಲ್ಲಿ ಎಣ್ಣೆ ಪಾರ್ಟಿ ಮಾಡಲು ಹೋದರು. ಆದರೆ ಕುಡಿಯುತ್ತಿದ್ದ ವೇಳೆ ವಾಸು ಸೈಡ್ಸ್ ಎಲ್ಲಿ ಎಂದು ಕೇಳಿದನು. ಆಗ ವಿನಯಗಂ ಅಯ್ಯೊ ಬಾತುಕೋಳಿ ಮಾಂಸ ತರೋದನ್ನ ಮರೆತುಬಿಟ್ಟೆ ಎಂದಾಕ್ಷಣ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಜಗಳ ತಾರಕ್ಕಕ್ಕೇರಿ ಸಿಟ್ಟಿಗೆದ್ದ ವಾಸು ತನ್ನ ಬಳಿಯಿದ್ದ ಚಾಕುವಿನಿಂದ ವಿನಯಗಂ ಮೇಲೆ ಹಲ್ಲೆ ಮಾಡಿದ್ದಾನೆ. ಆತನಿಗೆ ಚುಚ್ಚಿ ಕೊಲೆಗೈದು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಈ ವೇಳೆ ಜಮೀನಿನ ದಾರಿಯಲ್ಲಿ ಹೋಗುತ್ತಿದ್ದವರು ಗಲಾಟೆ ಸದ್ದು ಕೇಳಿ ಸ್ಥಳಕ್ಕೆ ಹೋಗುವಷ್ಟರಲ್ಲಿ ವಾಸು ವಿನಯಗಂ ಅನ್ನು ಕೊಲೆ ಮಾಡಿ ಓಡಿ ಹೋಗಿದ್ದನು. ಹೀಗಾಗಿ ತಕ್ಷಣ ಪೊಲೀಸರಿಗೆ ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನುಮಾನದ ಮೇರೆಗೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ.