ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರಿದಿದೆ. ಇದರ ವಿರುದ್ಧ ಹೋರಾಡಲು ಇಡೀ ರಾಜ್ಯ ಹೆಣಗುತ್ತಿದೆ. ವೈದ್ಯರು, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಹಲವರು ಹಗಲು ರಾತ್ರಿಯೆನ್ನದೇ ಕೊರೋನಾ ವೈರಸ್ ತಡೆಗೆ ಹೋರಾಡುತ್ತಿದ್ದಾರೆ. ಹೀಗೆಯೇ ಕೋವಿಡ್-19 ನಿಯಂತ್ರಣಕ್ಕೆ ತರಲು ಉದ್ಯಮಿಗಳು, ಸಿನಿಮಾ ನಟರು ತಮ್ಮ ಕೈಲಾದ ಆರ್ಥಿಕ ನೆರವು ನೀಡುತ್ತಿದ್ದಾರೆ. ಹೀಗೆ ಇದುವರೆಗೂ ರಾಜ್ಯದ ಸಿಎಂ ಪರಿಹಾರ ನಿಧಿಗೆ 267 ಕೋಟಿ ರೂ. ಹರಿದು ಬಂದಿದೆ.
ಸಿಎಂ ಪರಿಹಾರ ನಿಧಿ ಖಾತೆಗೆ ಒಟ್ಟು 267.73 ಕೋಟಿ ರೂ. ಹಣ ಹರಿದು ಬಂದಿದೆ. ಕೋವಿಡ್-19 ವಿರುದ್ಧ ಹೋರಾಟಕ್ಕೆ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು, ಉದ್ಯಮಿಗಳು, ಸಿನಿಮಾ ನಟ-ನಟಿಯರು ತಮ್ಮ ಕೈಲಾದ ಆರ್ಥಿಕ ನೆರವು ನೀಡಿದ್ದಾರೆ. ಜತೆಗೆ ವಿವಿಧ ನಿಗಮ ಮಂಡಳಿಗಳಿಂದ ಚೆಕ್ ರೂಪದಲ್ಲಿ ಬಂದ ಹಣ ಇದಾಗಿದೆ.
ಇನ್ನು, ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಗೆ ಸರ್ಕಾರ ಮಾಹಿತಿ ನೀಡಿದೆ. ಸುಮಾರು 270 ಕೋಟಿ ರೂ.ನಷ್ಟು ಹಣ ಕೊರೋನಾ ವೈರೆಸ್ ವಿರುದ್ಧದ ಹೋರಾಟಕ್ಕೆ ಹರಿದು ಬಂದಿದೆ ಎಂದು ಆರ್ಟಿಐ ಅರ್ಜಿಗೆ ಮಾಹಿತಿ ಕೊಟ್ಟಿದೆ.
ರಾಜ್ಯದಲ್ಲಿ ಕೊರೋನಾ ಓಟ ಮುಂದುವರಿದಿದೆ. ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯಾದ್ಯಂತ 378 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಬೆಂಗಳೂರು ಮತ್ತು ಮಂಗಳೂರು ನಗರಗಳಲ್ಲಿ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ 59 ಮಂದಿ ಮೃತಪಟ್ಟಂತಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 5,213 ತಲುಪಿದೆ.
ಸೋಂಕು ಹೆಚ್ಚಾಗುತ್ತಿರುವ ರೀತಿಯಲ್ಲೇ ಸೋಂಕಿನಿಂದ ಗುಣಮುಖಗೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಸಮಾಧಾನದ ಸಂಗತಿ. ನಿನ್ನೆ ಸಂಜೆಯಿಂದ ಈವರೆಗೆ ಒಟ್ಟು 280 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೂ 1,968 ಮಂದಿ ಗುಣಮುಖರಾದಂತಾಗಿದೆ.