ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ: ಪಟ್ಟಣದ ತೋಟಗಾರಿಕಾ ಇಲಾಖೆಯ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ತೋಟಗಾರಿಕಾ ಇಲಾಖೆಯ ವತಿಯಿಂದ ಹಾಪ್ಕಾಮ್ಸ್ ದರದಲ್ಲಿ ಹಣ್ಣು-ತರಕಾರಿ ಮಾರಾಟ ಮಾಡುವ ಸಣ್ಣ ಸಣ್ಣ ವ್ಯಾಪಾರಿಗಳಿಗೆ ನೀಡಲಾದ ಹಾಪ್ಕಾಮ್ಸ್ ಪಾಸ್ಗಳನ್ನು ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ವಿತರಣೆ ಮಾಡಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಸಾರ್ವಜನಿಕರಿಗೆ ಹಾಪ್ ಕಾಮ್ಸ್ ದರದಲ್ಲಿ ಅಂದರೆ ಯೋಗ್ಯ ಕೈಗೆಟಕುವ ದರದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಳ್ಳುವ ಗಾಡಿಯಲ್ಲಿ ಮಾರಾಟ ಮಾಡಲು ಮುಂದೆ ಬಂದಿರುವ ಸಣ್ಣ ವ್ಯಾಪಾರಿಗಳನ್ನು ತೋಟಗಾರಿಕಾ ಇಲಾಖೆ ಮತ್ತು ತಾಲೂಕು ಆಡಳಿತದ ವತಿಯಿಂದ ಗುರ್ತಿಸಿ ಅಧಿಕೃತವಾದ ಪಾಸ್ಗಳನ್ನು ವಿತರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬರು ಒಂದೊಂದು ಪಟ್ಟಣದ ವಿವಿಧ ವಾರ್ಡುಗಳನ್ನು ಹಂಚಿಕೆ ಮಾಡಿಕೊಂಡು ಸಾರ್ವಜನಿಕರಿಗೆ ಅವರ ಮನೆ ಬಾಗಿಲಿನಲ್ಲಿ ಅಗತ್ಯ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡಬೇಕೆಂದು ತಹಸೀಲ್ದಾರ್ ಅವರು ಸಲಹೆ ನೀಡಿದರು. ಮಾರಾಟ ಮಾಡುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಗತ್ಯ ಸುರಕ್ಷತಾ ವಿಧಾನವಾದ ಮಾಸ್ಕುಗಳನ್ನು ಧರಿಸಿಕೊಂಡಿರಬೇಕು. ಕೊಂಡುಕೊಳ್ಳಲು ಬರುವವರೂ ಸಹ ಮಾಸ್ಕುಗಳನ್ನು ಧರಿಸಿ ಕೊಂಡುಕೊಳ್ಳಬೇಕು ಈ ಮೂಲಕ ಕರೋನಾ ಸೋಂಕು ಹರಡದಂತೆ ನೋಡಿಕೊಳ್ಳಬೇಕು ಎಂದು ಸಣ್ಣ ವ್ಯಾಪಾರಿಗಳಿಗೆ ತಿಳಿಸಿದರು.
ಸಾರ್ವಜನಿಕರು ಸಹ ಅನಗತ್ಯವಾಗಿ ಹಣ್ಣು ಮತ್ತು ತರಕಾರಿಗಾಗಿ ಹೊರಗಡೆ ಓಡಾಡುವುದನ್ನು ನಿಲ್ಲಿಸಿ ತಮ್ಮ ಮನೆ ಬಾಗಿಲಿಗೆ ಬಂದು ಹಾಪ್ ಕಾಮ್ಸ್ ಬೆಲೆಯಲ್ಲಿ ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳ ಬಳಿ ಖರೀದಿ ಮಾಡುವ ಮೂಲಕ ಲಾಕ್ಡೌನ್ ಯಶಸ್ಸಿಗೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಶಿವಮೂರ್ತಿ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಡಾ.ನಾರಾಯಣಮೂರ್ತಿ, ತೋಟಗಾರಿಕಾ ಅಧಿಕಾರಿಗಳಾದ ಡಾ.ಆರ್.ಜಯರಾಂ, ಎಸ್.ಜೆ.ಮಂಜುನಾಥ್, ಪುಟ್ಟಣ್ಣ, ಪತ್ರಕರ್ತರಾದ ಸಿಂ.ಕಾ.ಸುರೇಶ್, ಕಾಮನಹಳ್ಳಿ ಮಂಜು ನಾಥ್, ಮತ್ತಿತರರು ಉಪಸ್ಥಿತರಿದ್ದರು.