ಬೆಂಗಳೂರು : ತಾವು ಸಿನಿಮಾವೊಂದನ್ನು ಮಾಡುತ್ತಿದ್ದೇವೆ. ನೀವೇ ನಿರ್ದೇಶನ ಮಾಡಿ ಎಂಬುದಾಗಿ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಅವರನ್ನು ಐವರು ನಂಬಿಸಿದ್ದಾರೆ. ಅದರಂತೆಯೇ ಶೂಟಿಂಗ್ ಕೂಡ ಐದು ದಿನ ನಡೆಸಿದ್ದಾರೆ. ಕೊನೆಗೆ ಇದ್ದಕ್ಕಿದ್ದಂತೆ ಹಣದ ಅಡಚಣೆಯ ನೆಪವೊಡ್ಡಿ ಸಿನಿಮಾ ಶೂಟಿಂಗ್ ನಿಲ್ಲಿಸಿದ್ದಾರೆ.
ಸಿನಿಮಾ ಶೂಟಿಂಗ್ ನಿಂತರ ನಂತ್ರ, ಹೊಸ ಆಟ ಶುರುಮಾಡಿದಂತ ಐವರು ಖದೀಮರು, ತಮ್ಮ ಸೈಟ್ ಮಾರಾಟ ಮಾಡಿಯಾದರೂ ಬೇಗ ಶೂಟಿಂಗ್ ಶುರು ಮಾಡೋಣ ಅಂತ ನಾರಾಯಣ್ ನಂಬಿಸಿದ್ದಾರೆ. ಅಲ್ಲದೇ ಸೈಟ್ ನಿಮಗೆ ಕೊಡುತ್ತೇವೆ ಎಂಬುದಾಗಿ ನಂಬಿಸಿ, 1.6 ಕೋಟಿಗೂ ಮಾರಿದ್ದಾರೆ. ಹೀಗೆ ಖರೀದಿಸಿದಂತ ಸೈಟ್ ದಾಖಲೆಗಳನ್ನು ಬ್ಯಾಂಕಿಗೆ ನೀಡಿ, ಸಾಲ ಪಡೆದು, ಸಿನಿಮಾ ಮಾಡಲು ಹೊರಟಂತ ನಿರ್ದೇಶಕ ಎಸ್ ನಾರಾಯಣ್ ಗೆ ಅಸಲಿಯ ಖದೀಮರ ಕರಾಮತ್ತು ಗೊತ್ತಾಗಿದೆ.
ಬ್ಯಾಂಕ್ ಸಿಬ್ಬಂದಿಗಳು ನೀವು ನೀಡಿರುವಂತ ಸೈಟ್ ನ ದಾಖಲೆಗಳೇ ನಕಲಿ. ಸಾಲ ನೀಡಲಾಗುವುದಿಲ್ಲ ಎಂಬುದಾಗಿ ತಿಳಿಸುತ್ತಿದ್ದಂತೆ, ತಾವು ಮೋಸ ಹೋಗಿರುವ ವಿಚಾರ ನಿರ್ದೇಶಕ ಎಸ್ ನಾರಾಯಣ್ ಗೆ ತಿಳಿದಿದೆ. ಹೀಗಾಗಿ ಸಿಸಿಬಿ ಪೊಲೀಸರಿಗೆ ದೂರು ನೀಡಿರುವ ಅವರು, ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ, ತಮಗೆ ಹಣ ಕೊಡಿಸುವಂತೆ ಕೋರಿಕೊಂಡಿದ್ದಾರೆ.