ಬೆಳಗಾವಿ: ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ‘ಈದ್ ಉಲ್ ಫಿತ್ರ್’ ಹಬ್ಬ, ಬಸವೇಶ್ವರ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ನಿಮಿತ್ತ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ಪ್ರಕಟಣೆ ನೀಡಿರುವ ಅವರು, ‘ಜಯಂತಿಗಳ ಹಿನ್ನೆಲೆಯಲ್ಲಿ ಪೂಜೆ, ಪ್ರಾರ್ಥನೆ, ಮೆರವಣಿಗೆಗಳು ಜರುಗಲಿರುವುದರಿಂದ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಮೂರು ದಿನದ ಸೂಕ್ತ ಬಂದೋಬಸ್ತ್ ಕರ್ತವ್ಯಕ್ಕೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ವಿಶೇಷ ಘಟಕಗಳಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಮೂವರು ಡಿಸಿಪಿ, 16 ಡಿಎಸ್ಪಿ, 44 ಸಿಪಿಐ/ಪಿಐ, 62 ಪಿಎಸ್ಐ, 140 ಎಎಸ್ಐ, 2ಸಾವಿರ ಸಿಬ್ಬಂದಿ, 600 ಗೃಹರಕ್ಷಕ ದಳ, ವಿಶೇಷ ಘಟಕಗಳಾದ ಕೆಎಸ್ಆರ್ಪಿ-12 ತುಕಡಿಗಳು, ಸಿಎಆರ್-10 ತುಕಡಿಗಳು, ಎಎಸ್ಸಿ-3, ರಾಜ್ಯ ಗುಪ್ತವಾರ್ತೆ, ಆಂತರಿಕ ಭದ್ರತಾ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಈ ಆಚರಣೆಗಳ ಕಾಲಕ್ಕೆ ಸಂಪೂರ್ಣವಾಗಿ ಡ್ರೋನ್ ಕ್ಯಾಮೆರಾದಲ್ಲಿ ವಿಶೇಷ ಕಣ್ಗಾವಲು ಇಡಲಾಗುವುದು’ ಎಂದು ತಿಳಿಸಿದ್ದಾರೆ.
‘ಪೂಜೆ, ಪ್ರಾರ್ಥನೆ, ಮೆರವಣಿಗೆಗಳು ಮುಕ್ತಾಯವಾಗುವವರೆಗೆ ನಗರದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. ಪರ್ಯಾಯ ಮಾರ್ಗದಲ್ಲಿ ಸಂಚರಿಸಿ ಸಹಕರಿಸಬೇಕು’ ಎಂದು ಕೋರಿದ್ದಾರೆ.