ಬೆಳಗಾವಿ: ಕುಟುಂಬದವರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ, ಇದೀಗ ಜೈಲಿನಲ್ಲಿ ಕಣ್ಣೀರು ಹಾಕುತ್ತಿದ್ದಾರೆ.
ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಅವರು, ವಿಚಾರಣಾಧೀನ ಕೈದಿಯಾಗಿ ಹಿಂಡಲಗಾ ಕಾರಾಗೃಹದಲ್ಲಿ ಕಾಲ ಕಳೆಯುತ್ತಿದ್ದಾರೆ. ಧಾರವಾಡದ ತನ್ನ ಡೇರಿಯಲ್ಲಿ ಪ್ರತಿ ದೀಪಾವಳಿಯನ್ನೂ ಮನೆಯವರೊಂದಿಗೆ ಬೆರೆತು ಭರ್ಜರಿಯಾಗಿ ಆಚರಿಸುತ್ತಿದ್ದ ಸಂದರ್ಭ ನೆನೆದು ಶನಿವಾರ ರಾತ್ರಿ ಜೈಲು ಸಿಬ್ಬಂದಿ ಬಳಿ ಬೇಸರ ತೋಡಿಕೊಂಡಿದ್ದಾರೆ.
‘ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನನ್ನನ್ನು ನೋಡಲು ಕುಟುಂಬದವರು ಬಂದರೆ ಕಡಿಮೆ ಸಮಯವಾದರೂ ಪರವಾಗಿಲ್ಲ, ಭೇಟಿಗೆ ಅವಕಾಶ ನೀಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.