ಬೆಳಗಾವಿ:ರಾಜ್ಯಾದ್ಯಂತ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಮಹಾಮಾರಿ ವೈರಸ್ ಯಾರಿಗೆ, ಹೇಗೆ, ಯಾವಾಗ ತಲುಪುತ್ತದೆ ಎನ್ನುವುದೇ ತಿಳಿಯುವುದಿಲ್ಲ. ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಬಳಿಕ ವ್ಯಾಪಕವಾಗಿ ಸೋಂಕು ಹೆಚ್ಚಳವಾಗುತ್ತಿದ್ದು, ಇದರ ತಡೆಗೆ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ. ಏತನ್ಮಧ್ಯೆ ಬೆಳಗಾವಿಯಲ್ಲಿ ಬಳೆ ಮಾರುವ ಹೆಂಗಸಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.
ಹೌದು, ಜಿಲ್ಲೆಯಲ್ಲಿ ಪ್ರತಿ ದಿನ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಬಳೆ ತೊಡಿಸುತ್ತಿದ್ದ ೫೮ ವರ್ಷದ ಬಳೆಗಾರ ಮಹಿಳೆಗೂ ಕೊರೊನಾ ವೈರಸ್ ತಗಲಿದ್ದು, ಇದೀಗ ಈ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿ ಬಂದವರನ್ನು ಪತ್ತೆ ಮಾಡುವಲ್ಲಿ ಜಿಲ್ಲಾಡಳಿತ ಕಾರ್ಯನಿರತವಾಗಿದೆ.
ಬೆಳಗಾವಿ ನಗರ ಮಾಳಿ ಗಲ್ಲಿಯ ೫೮ ವರ್ಷದ ಬಳೆಗಾರ ಮಹಿಳೆ ಪ್ರತಿ ದಿನ ನಗರದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ೨೦೦ಕ್ಕೂ ಹೆಚ್ಚು ಮನೆಗಳ ಮಹಿಳೆಯರಿಗೆ ಬಳೆ ತೊಡಿಸಿದ್ದಾಳೆ ಎಂದು ತಿಳಿದುಬಂದಿದ್ದು, ಈ ಮಹಿಳೆಯ ಟ್ರಾವಲ್ ಹಿಸ್ಟರಿ ನೋಡಿ ಅಧಿಕಾರಿಗಳು ದಂಗಾಗಿದ್ದಾರೆ.
ಸೋಂಕು ತಗುಲಿರುವ ಈ ಮಹಿಳೆ ಸುತ್ತಾಡಿದ ಹಿನ್ನೆಲೆ ನೋಡಿ ಅಧಿಕಾರಿಗಳು ಯಾರನ್ನು ಕ್ವಾರಂಟೈನ್ ಮಾಡಬೇಕು ಎಲ್ಲಿ ಮಾಡಬೇಕು, ಈ ಮಹಿಳೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡುವುದಾದರೂ ಹೇಗೆ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಈ ಮಹಿಳೆಯಿಂದ ಬಳೆ ತೊಡಿಸಿಕೊಂಡ ನಗರದ ಮಹಿಳೆಯರಿಗೂ ಇದೀಗ ಆತಂಕ ಶುರುವಾಗಿದೆ.
ರಾಜ್ಯದಲ್ಲಿ ಸೋಂಕು ವ್ಯಾಪಕವಾಗಿ ಏರುತ್ತಿರುವುದು ಒಂದು ರೀತಿಯ ತಲೆನೋವಾದರೆ, ಸೋಂಕಿತರು ತಿರುಗಾಡಿದ ಟ್ರಾವೆಲ್ ಹಿಸ್ಟರಿ ಹುಡುಕುವುದು ಇನ್ನೊಂದು ರೀತಿಯ ತಲೆ ನೋವಾಗಿ ಪರಿಣಮಿಸಿದೆ
Check Also
ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್ಯಾಂಕ್
Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …