ಬೆಂಗಳೂರು/ಗೋವಾ: ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ರಾಜ್ಯದ ಬಿಜೆಪಿಯಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಗೋವಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ನಡ್ಡಾ, ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಯಡ್ಡಿಯವರ ಬೆನ್ನು ತಟ್ಟಿದ್ದಾರೆ. ಜುಲೈ 25 ಕ್ಕೆ ಯಡಿಯೂರಪ್ಪನವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅಲ್ಲದೇ ಬೆಳಗಾವಿಯಲ್ಲಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ಇಂದು ಸಂಜೆ ಹೈಕಮಾಂಡ್ನಿಂದ ಸಂದೇಶ ಬರಲಿದೆ ಕಾದು ನೋಡಿ ಎಂದು ಹೇಳಿದ್ದರು.
ಆದರೆ, ಇದುವರೆಗೂ ಬಿಎಸ್ವೈ ಅವರಿಗೆ ಯಾವುದೇ ಸಂದೇಶ ಬಂದಿಲ್ಲ ಎಂದು ಸ್ವತಃ ಅವರೇ ಸ್ಪಷ್ಟಪಡಿಸಿದ್ದು, ಈ ಎಲ್ಲ ಬೆಳವಣಿಗೆ ಮಧ್ಯೆಯೂ ನಾಳೆ ಮುಖ್ಯಮಂತ್ರಿಗಳು ಕಾರವಾರ ಜಿಲ್ಲಾ ಪ್ರವಾಸ ಕೈಗೆತ್ತಿಕೊಂಡಿದ್ದಾರೆ.
ಗೋವಾದಲ್ಲಿ ನಡ್ಡಾ ಅವರು ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿದ್ದು, ಕರ್ನಾಟಕದಲ್ಲಿ ಯಡಿಯೂರಪ್ಪನವರ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಅವರನ್ನು ಕೆಳಗಿಳಿಸುವ ಮನಸ್ಸಿಲ್ಲ ಎಂದಿದ್ದಾರೆ. ಸದ್ಯ ನಡ್ಡಾ ಅವರು ಗೋವಾದಲ್ಲಿದ್ದು, ಅವರು ದೆಹಲಿಗೆ ಹೋದ ನಂತರ ಏನಾದರೂ ಬೆಳವಣಿಗೆ ನಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.