ಹುಬ್ಬಳ್ಳಿ: ಸಿಎಂ ಬಿ.ಎಸ್ ಯಡಿಯೂರಪ್ಪ ಹೈಕಮಾಂಡ್ ಸಂದೇಶಕ್ಕಾಗಿ ಕಾಯುತ್ತಿರುವ ಬೆನ್ನಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ದಿಢೀರ್ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಹುಬ್ಬಳ್ಳಿಯ ಮಯೂರಿ ಎಸ್ಟೇಟ್ ನಲ್ಲಿರುವ ಪ್ರಹ್ಲಾದ್ ಜೋಶಿ ಮನೆಗೆ ದಿಢೀರ್ ಭೇಟಿ ನೀಡಿರುವ ಬಸವರಾಜ ಬೊಮ್ಮಾಯಿ, ಒಂದು ಗಂಟೆಗೂ ಹೆಚ್ಚು ರಹಸ್ಯ ಮಾತುಕತೆ ನಡೆಸಿರುವುದು ಕುತೊಹಲಕ್ಕೆ ಕಾರಣವಾಗಿದೆ. ಇಂದು ಮುಂಜಾನೆಯಷ್ಟೆ ನಾನು ಸಿಎಂ ಬದಲಾವಣೆ ಬಗ್ಗೆ ಎನೂ ಮಾತನಾಡಲಾರೆ. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಹೇಳಿಕೆ ನೀಡಿದ್ದ ಜೋಶಿ ಜೊತೆ ಬೊಮ್ಮಾಯಿ ರಹಸ್ಯ ಮಾತುಕತೆ ಮಾಡಿರವುದು ರಾಜ್ಯ ರಾಜಕಾರಣದಲ್ಲಿ ಹಲವು ಬಗೆಯ ಚರ್ಚೆಗೆ ಗ್ರಾಸವಾಗಿದೆ.
ಸುಮಾರು ಒಂದು ಗಂಟೆಗೆ ಹೆಚ್ಚು ಕಾಲ ನಾಯಕರಿಬ್ಬರು ಚರ್ಚೆ ನಡೆಸಿದ್ದು, ನಾಳೆ ಕೇಂದ್ರ ನಾಯಕರಿಂದ ಸಿಎಂ ಬಿಎಸ್ವೈಗೆ ಏನೂ ಸಂದೇಶ ಬರಲಿದೆ ಅನ್ನೋದು ಸಹ ಕುತೂಹಲ ಮೂಡಿಸಿದೆ.
ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ , ತುಂಬಾ ದಿನಗಳ ನಂತರ ಜೋಶಿಯವರನ್ನು ಭೇಟಿಯಾಗುತ್ತಿದ್ದೇನೆ. ಕೋವಿಡ್ ಕಾರಣಕ್ಕೆ ಮೂರುನಾಲ್ಕು ತಿಂಗಳಿಂದ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಜೋಶಿಯವರು ಕರೆ ಮಾಡಿ, ಭೇಟಿಯಾಗುವಂತೆ ಸೂಚಿಸಿದ್ದರು. ನನ್ನ ಶಿಗ್ಗಾಂವಿ ಕ್ಷೇತ್ರ ಜೋಶಿಯವರ ಸಂಸತ್ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಮಳೆಯಿಂದ ಹಾನಿ ಹೆಚ್ಚಾಗಿದೆ. ಮಳೆಹಾನಿ ಬಗ್ಗೆ ಚರ್ಚಿಸಲು ಜೋಶಿಯವರನ್ನು ಭೇಟಿ ಮಾಡಿದ್ದೆ. ನಮ್ಮ ಭೇಟಿ ಅತ್ಯಂತ ಸಹಜವಾದದ್ದು. ನಾಯಕತ್ವದ ಬದಲಾವಣೆ ಚರ್ಚೆ ಜೋಶಿ ಮತ್ತು ನನ್ನ ನಡುವೆ ಅಪ್ರಸ್ತುತ. ಆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.