ಬೆಳಗಾವಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗಿರುವ ಹಿನ್ನಲೆಯಲ್ಲಿ, ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿರುವ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಎಂಟು ಗಂಟೆಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು,10 ಗಂಟೆ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇನ್ನು ಮಧ್ಯಾಹ್ನ ಎರಡು ಗಂಟೆಗೆ 50ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುವುದು. ಸದ್ಯ ಕೃಷ್ಣಾ ನದಿಯಲ್ಲಿ 1.34 ಲಕ್ಷ ಕ್ಯೂಸೆಕ್ ನೀರಿನ ಹರಿವು ಇದೆ. ಇಂದು ರಾತ್ರಿ ವೇಳೆಗೆ ಕೃಷ್ಣಾ ನದಿಯಲ್ಲಿ ಎರಡು ಲಕ್ಷ ಕ್ಯೂಸೆಕ್ ಹರಿವು ಇರಲಿದೆ.ಹೀಗಾಗಿ ನದಿಪಾತ್ರದಲ್ಲಿರುವ ಜನರಿಗೆ ಸ್ಥಳಾಂತರ ಮಾಡುವಂತ ಕೆಲಸ ಮುಂದುವರೆದಿದೆ. ಈಗಾಗಲೇ ಒಂದು ಎನ್ಡಿಆರ್ಎಪ್ ತಂಡ ಬಂದಿದ್ದು, ಅಪಾಯವಿರುವ ಸ್ಥಳಗಳಿಗೆ ಇನ್ನೊಂದು ತಂಡವನ್ನು ನಿಯೋಜನೆ ಮಾಡಲಾಗಿದೆ.
ಕೃಷ್ಣಾ ನದಿ ಪಕ್ಕದ ಗ್ರಾಮಗಳನ್ನು ಖಾಲಿ ಮಾಡಿಸುತ್ತಿರುವ ತಹಶಿಲ್ದಾರ್
ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ, ಕೃಷ್ಣಾ ನದಿ ತಟದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹೀಗಾಗಿ ಚಿಕ್ಕೋಡಿ ತಾಲೂಕಿನ ಇಂಗಳಿ, ಯಡೂರ ವಾಡಿ, ಚಂದೂರ ಗ್ರಾಮಗಳಿಗೆ ತಹಶಿಲ್ದಾರ್ ಪ್ರವೀಣ್ ಜೈನ್ ಭೇಟಿ ನೀಡಿದ್ದು, ಸಂಜೆ ವೇಳೆಗೆ ಎರಡು ಕಾಳಜಿ ಕೇಂದ್ರ ತೆರಯಲಾಗುವುದು ಎಂದು ಸೂಚಿಸಿದ್ದಾರೆ. ಅಲ್ಲದೆ ಗ್ರಾಮಸ್ಥರ ಮನವೊಲಿಸಿದ್ದು, ಸುರಕ್ಷಿತ ಸ್ಥಳಗಳತ್ತ ತೆರಳಲು ಸೂಚನೆ ನೀಡಿದ್ದಾರೆ.