ಉಡುಪಿ: ಇಲ್ಲಿಗೆ ಸಮೀಪದ ಬ್ರಹ್ಮಾವರದ ಉಪ್ಪಿನಕೋಟೆ ಅಪಾರ್ಟ್ಮೆಂಟ್ನಲ್ಲಿ ಕಳೆದ ಜುಲೈ.12 ರಂದು ಸಂಭವಿಸಿದ ವಿಶಾಲಾ ಗಾಣಿಗ ಎಂಬ ಮಹಿಳೆಯ ಕೊಲೆಗೆ ಸಂಬಂದಿಸಿದಂತೆ ಮಹಿಳೆಯ ಪತಿ ರಾಮಕೃಷ್ಣ ಗಾಣಿಗ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣದಲ್ಲಿ ತನಿಖೆಗೆ ಪೊಲೀಸರು ನಾಲ್ಕು ತಂಡ ರಚಿಸಿದ್ದು, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಹೊರ ರಾಜ್ಯದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಫೋನ್ ಕರೆ, ಸಾಮಾಜಿಕ ಜಾಲತಾಣ ಸಹಿತ ಎಲ್ಲ ಆಯಾಮಗಳಲ್ಲೂ ತನಿಖೆ ತೀವ್ರಗೊಂಡಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ. ವಿಶಾಲ ಗಾಣಿಗ ತಮ್ಮ ಫ್ಲಾಟ್ ನ ಕೊಠಡಿಯಲ್ಲಿ ವಯರ್ನಿಂದ ಕುತ್ತಿಗೆ ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಧರಿಸಿದ್ದ 2 ಲಕ್ಷ ರೂ. ಮೌಲ್ಯದ ಆಭರಣ ನಾಪತ್ತೆಯಾಗಿದ್ದು, ಹಣಕ್ಕಾಗಿ ನಡೆದ ಕೃತ್ಯ ಎಂದು ಆರಂಭದಲ್ಲಿ ಬಿಂಬಿತವಾಗಿತ್ತು.
ಇದನ್ನು ಸುಪಾರಿ ಕೊಲೆ ಎಂದು ಪೋಲೀಸರು ಶಂಕಿಸಿದ್ದು ತನಿಖೆ ಮುಂದುವರೆದಿದೆ.