ಹೊಸದಿಲ್ಲಿ: ಜಮ್ಮು ವಿಮಾನ ನಿಲ್ದಾಣದ ವಾಯುನೆಲೆಯ ಮೇಲೆ ಪಾಕ್ ಪ್ರಾಯೋಜಿತ ಡ್ರೋನ್ ದಾಳಿಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಸ್ವದೇಶಿ ಡ್ರೋನ್ ಪ್ರತಿರೋಧ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.
“ರುಸ್ತುಮ್ಜಿ ಸ್ಮಾರಕ ಉಪನ್ಯಾಸ’ದಲ್ಲಿ ಮಾತನಾಡಿದ ಅಮಿತ್ ಶಾ, ಡಿಆರ್ಡಿಒ ಅಥವಾ ಇತರ ಸಂಸ್ಥೆಗಳು ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ನರೇಂದ್ರ ಮೋದಿ ಪ್ರಧಾನಿ ಆಗುವವರೆಗೆ ದೇಶಕ್ಕೆ ಸ್ವತಂತ್ರ ರಕ್ಷಣ ನೀತಿ ಇರಲಿಲ್ಲ. ಮೋದಿ ಚುಕ್ಕಾಣಿ ವಹಿಸಿದ ಬಳಿಕ ಅಂಥ ನೀತಿ ಸಿದ್ಧವಾಗಿದೆ. ಹಿಂದೆ ನಮ್ಮ ಭದ್ರತಾ ನೀತಿ ವಿದೇಶಗಳಿಂದ ಪ್ರಭಾವಿತ ವಾಗಿತ್ತು ಅಥವಾ ವಿದೇಶಿ ನೀತಿಗಳೊಂದಿಗೆ ಬೆಸೆದಿರುತ್ತಿತ್ತು ಎಂದು ಅಮಿತ್ ಶಾ ಹೇಳಿದ್ದಾರೆ.
ಎಲ್ಲ ದೇಶಗಳೊಂದಿಗೆ ಶಾಂತಿಯುತ ಸಂಬಂಧ ಹೊಂದುವುದು ನಮ್ಮ ಸ್ವಭಾವ. ಆದರೆ ಯಾರಾದರೂ ನಮ್ಮನ್ನು ಕೆಣಕಿದರೆ, ಸಾರ್ವಭೌಮತ್ವಕ್ಕೆ ಸವಾಲು ಹಾಕಿದರೆ ಅದೇ ಭಾಷೆಯಲ್ಲಿ ಉತ್ತರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭದ್ರತಾ ನೀತಿ ಬಹಳ ಮಹತ್ವದ್ದು ಎಂದು ಶಾ ಹೇಳಿದ್ದಾರೆ.