ಚಾಮರಾಜನಗರ,: ಬೈಕ್ ನಲ್ಲಿ ಅಕ್ರಮವಾಗಿ ಪಡಿತರ ಹೊತ್ತೊಯ್ಯುವಾಗ ಪೊಲೀಸರ ದಾಳಿ, ಮೂವರನ್ನು ಬಂಧಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಬೈಕ್ ನಲ್ಲಿ ಅಕ್ರಮ ಪಡಿತರವನ್ನು ರಾಜಾರೋಷವಾಗಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಸರ್ಕಾರದಿಂದ ವಿತರಣೆ ಯಾಗುತ್ತಿರುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಿ ರಾಜಾರೋಷವಾಗಿ ಬೈಕ್ ನಲ್ಲಿ ಹೊತ್ತಯ್ಯುತ್ತಿದ್ದ ಆರೋಪಿಗಳನ್ನು ಮಾಲು ಸಮೇತ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬಸವರಾಜು, ಕೃಷ್ಣ ಹಾಗೂ ಕೊಳ್ಳೇಗಾಲದ ಬಾಬು ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 8 ಮೂಟೆ ಪಡಿತರ, 3 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಕೊಳ್ಳೇಗಾಲದ ಸುತ್ತಮುತ್ತಲಿನಲ್ಲಿ ಬಡವರಿಂದ ಪಡಿತರವನ್ನು ಹೆಚ್ಚಿನ ಬೆಲೆಗೆ ಖರೀದಿಸಿ ಮಳವಳ್ಳಿ ಕಡೆಗೆ ಸಾಗಿಸಲು ದಾಸನಪುರ ಸೇತುವೆ ಮಾರ್ಗವಾಗಿ ಬೈಕ್ ಗಳಲ್ಲಿ ತೆರಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿದ ಸಬ್ ಇನ್ಸ್ ಪೆಕ್ಟರ್ ವಿ.ಚೇತನ್ ತಮ್ಮ ತಂಡದೊಂದಿಗೆ ದಿಢೀರ್ ದಾಳಿ ನಡೆಸಿ ಮೂವರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.
ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. ದಾಳಿಯಲ್ಲಿ ಸಿಬ್ಬಂದಿಗಳಾದ ದೊಡ್ಡವೀರಶೆಟ್ಟಿ, ಪ್ರದೀಪ್ ಜಗದೀಶ್ ಮತ್ತಿತ್ತರಿದ್ದರು.