ಬೆಂಗಳೂರು, ಜು. 14: ಮಹಾರಾಷ್ಟ್ರದ ಶಿರಡಿಯಿಂದ ನಾಡ ಪಿಸ್ತೂಲು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಮೂವರು ರೌಡಿ ಶೀಟರ್ಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಮೂರು ನಾಡ ಪಿಸ್ತೂಲು ಹಾಗೂ 24 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆಗ್ಗಡೆ ನಗರದ ನಿವಾಸಿಗಳಾದ ಫಯಾಜ್ ಉಲ್ಲಾ, ಮಹಮದ್ ಆಲಿ, ಸಯ್ಯದ್ ಸಿರಾಜ್ ಅಹಮದ್ ಬಂಧಿತ ಆರೋಪಿಗಳು. ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಫಯಾಜ್ ವುಲ್ಲಾ ವಿರುದ್ಧ ಈಗಾಗಲೇ ಆರು ಪ್ರಕರಣ ದಾಖಲಾಗಿವೆ. ಕೆ.ಆರ್.ಮಾರ್ಕೆಟ್ , ಬಾಗಲೂರು ಠಾಣೆ ಪೊಲೀಸರಿಂದಲೂ ಈತ ಬಂಧನಕ್ಕೆ ಒಳಗಾಗಿದ್ದ. ಈ ವೇಳೆಯೂ ಈತನಿಂದ 12 ನಾಡ ಪಿಸ್ತೂಲು ವಶಪಡಿಸಿಕೊಳ್ಳಲಾಗಿತ್ತು.
ಮತ್ತೊಮ್ಮ ಆರೋಪಿ ಮಹಮದ್ ಆಲಿ ಶಿವಾಜಿನಗರ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದು, ಈತನ ಹಿಂದೆ ಈವರೆಗೂ ನಾಲ್ಕು ಪ್ರಕರಣ ದಾಖಲಾಗಿವೆ. ಮಾದಕ ವಸ್ತು ಜಾಲ ಪ್ರಕರಣದಲ್ಲಿ ಕೊತ್ತನೂರು ಪೊಲೀಸರು ನಾಲ್ಕು ವರ್ಷದ ಹಿಂದೆ ಬಂಧಿಸಿದ್ದರು. ಮತ್ತೊಬ್ಬ ಆರೋಪಿ ಸಯ್ಯದ್ ಸಿರಾಜ್ ಅಹಮದ್ ಗಂಗಾನಗರದ ನಿವಾಸಿಯಾಗಿದ್ದು, ಈತನ ವಿರುದ್ಧವೂ ಅಕ್ರಮ ಪಿಸ್ತೂಲು ಡೀಲಿಂಗ್ ಸಂಬಂಧ ಕೇಸು ದಾಖಲಾಗಿದೆ. ಮೂವರು ಆರೋಪಿಗಳು ಮಹಾರಾಷ್ಟ್ರದ ಶಿರಡಿಯ ಕೊಪ್ಪರ್ ಗಾವ್ನಲ್ಲಿ ನಾಡ ಪಿಸ್ತೂಲು ಖರೀದಿಸಿ ತಮ್ಮ ಶೋಕಿಗಾಗಿ ಹಾಗೂ ಆತ್ಮ ರಕ್ಷಣೆಗಾಗಿ ವಶದಲ್ಲಿಟ್ಟುಕೊಂಡಿದ್ದರು ಎಂಧು ಪೊಲೀಸರು ತಿಳಿಸಿದ್ದಾರೆ.
ಕದ್ದ ವಾಹನ ಜಾಡು ಹಿಡಿದು ತನಿಖೆ: ಎರಡು ವರ್ಷದ ಹಿಂದೆ ದಾಖಲಾಗಿದ್ದ ಎಟಿಎಂಗೆ ಹಣ ತುಂಬುವ ವಾಹನದ ಜಾಡು ಹಿಡಿದು ತನಿಖೆ ನಡೆಸಿದ ಗೋವಿಂದಪುರ ಠಾಣೆ ಪೊಲೀಸರು ಕದ್ದ ವಾಹನದ ಮಾರಾಟ ಜಾಲವನ್ನು ಬಯಲಿಗೆ ಎಳೆದಿದ್ದಾರೆ. 1.80 ಕೋಟಿ ರೂ. ಮೌಲ್ಯದ 20 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಶಬ್ಬೀರ್ ಖಾನ್ ಬಂಧಿತ ಆರೊಪಿ. ಶಕ್ತಿವೇಲು, ಶರಣ್ ತಲೆ ಮರೆಸಿಕೊಂಡಿದ್ದಾರೆ.
ಆರೋಪಿತನಿಂದ ಐದು ಇನ್ನೋವ, ಟೆಂಪೋ ಟ್ರಾವೆಲರ್, ಮಹೀಂದ್ರ ಎಕ್ಸ ಯುವಿ, ಟೊಯೊಟಾ ವೆರಿಟೋಸ್ ಸೇರಿದಂತೆ ಅನೇಕ ವಾಹನಗಳನ್ನು ಜಪ್ತಿ ಮಾಡಿದ್ದಾರೆ. 2017 ರಲ್ಲಿ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಟಿಎಂಗೆ ಹಣ ತುಂಬುವ ವಾಹನವನ್ನು ಕದ್ದೊಯ್ದಿದ್ದರು. ಈ ಪ್ರಕರಣದಲ್ಲಿ ಹಣ ಕದ್ದಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದರು. ಆದರೆ ವಾಹನ ಸಿಕ್ಕಿರಲಿಲ್ಲ. ಈ ವಾಹನದ ಜಾಡು ಹಿಡಿದು ತನಿಖೆ ನಡೆಸಿದ ಗೋವಿಂದಪುರ ಪೊಲೀಸರು ಕದ್ದ ವಾಹನ ಮಾರಾಟ ಮಾಡುವ ಜಾಲವನ್ನೇ ಪತ್ತೆ ಮಾಡಿದ್ದಾರೆ. ಕಳುವು ಮಾಡಿದ್ದ 20 ವಾಹನ ವಶಪಡಿಸಿಕೊಂಡಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.