ಕಲಬುರಗಿ: ಬಿಜೆಪಿ ಸರ್ಕಾರ ಬಂದು ಎರಡು ವರ್ಷವಾದರೂ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ತುಟಿ ಬಿಚ್ಚದ ಸಿಎಂ ಬಿ.ಎಸ್ ಯಡಿಯೂರಪ್ಪ ಕಲಬುರಗಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಕರಂದ್ಲಾಜೆ ಅವರನ್ನು ಹಾಡಿ ಹೊಗಳಿದ್ದಾರೆ.
ಕಲಬುರಗಿ ನಗರದಲ್ಲಿ ನೂತನ ಮಾದರಿಯ ತರಕಾರಿ ಮಾರುಕಟ್ಟೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಬಿಎಸ್ವೈ, ರೈತರ ಬಗ್ಗೆ ಸದಾ ಕಾಳಜಿ ವಹಿಸುವ ಶೋಭಾ ಕರಂದ್ಲಾಜೆ ಅವರನ್ನು ಪ್ರಧಾನಿ ಮೋದಿ ಕೃಷಿ ಸಚಿವರನ್ನಾಗಿ ಮಾಡಿದ್ದಾರೆ. ಶೋಭಾ ಕರಂದ್ಲಾಜೆ ಅವರು ಈ ಮೊದಲು ಸಚಿವರಾಗಿ ರಾಜ್ಯದ ತುಂಬಾ ಸುತ್ತಾಡಿದ್ದಾರೆ. ಆಗ ಅವರನ್ನು ಕಾಣಲು, ಮಾತು ಕೇಳಲು ಕಾತುರದಿಂದ ಸೇರುತ್ತಿದ್ರಿ. ಈಗ ಅವರು ರೈತರ ಸಮಸ್ಯೆ ಪರಿಹರಿಸಲು ದೇಶ ಸುತ್ತುವರಿಯಲಿದ್ದಾರೆ. ಅದೇ ಪ್ರೀತಿ ವಿಶ್ವಾಸದಿಂದ ಅವರನ್ನು ಕಾಣಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಶೋಭಾ ಕರಂದ್ಲಾಜೆ ರೈತರ ಬಗ್ಗೆ ಸದಾ ತುಡಿತ ಹೊಂದಿದವರಾಗಿದ್ದಾರೆ. ಈ ಹಿಂದೆ ರೈತರ ಬಗ್ಗೆ ತುಂಬಾ ಕಾಳಜಿ ವಹಿಸಿದ್ದರು. ಇದೀಗ ಕೃಷಿ ಸಚಿವೆಯಾಗಿದ್ದಾರೆ ಎಂದು ಕರಂದ್ಲಾಜೆ ಅವರ ಬಗ್ಗೆ ಬಿಎಸ್ವೈ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.