ವಿಜಯಪುರ: ಮಂಡ್ಯ ಅಕ್ರಮ ಗಣಿಗಾರಿಕೆ ಹಾಗೂ ಕೆ ಆರ್ ಎಸ್ ಜಲಾಶಯದ ವಿಷಯದಲ್ಲಿ ಮಾಜಿ ಸಿ.ಎಂ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅವರ ಮಧ್ತೆ ನಡೆಯುತ್ತಿರುವ ವಾಕ್ಸಮರ ಜೋರಾಗಿದೆ. ಇಬ್ಬರ ಹೇಳಿಕಗಳು ಜನರಿಗೆ ನೋಡಲು, ಕೇಳಲು ತಮಾಷೆಯಾಗಿದ್ದರೂ ಕೇಳಲು ನಮಗೆ ಸಮಯವಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಇಬ್ಬರನ್ನೂ ಕುಟುಕಿದ್ದಾರೆ.
ಶುಕ್ರವಾರ ಸಂಜೆ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೃಷ್ಣರಾಜ ಸಾಗರ ಜಲಾಶಯದ ಕುರಿತು ಮುಖ್ಯ ಅಭಿಯಂತರರಿಂದ ಸರ್ಕಾರ ಸ್ಪಷ್ಟಿಕರಣ ಪಡೆದಿದ್ದು, ಜಲಾಶಯಕ್ಕೆ ಯಾವ ಅಪಾಯವೂ ಇಲ್ಲ ಎಂದಿದ್ದಾರೆ.
ಅಂಬರೀಶ ಸ್ಮಾರಕ ವಿಚಾರದ ಬಗ್ಗೆ ನಟ ದೊಡ್ಡಣ್ಣ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿರಂ ಸವದಿ, ಅದ್ಭುತ ನಟರಾಗಿದ್ದ
ಅಂಬರೀಶ ಸಾರ್ವಜನಿಕ ಬದುಕಿನಲ್ಲಿದ್ದರು. ರಾಜಕಾರಣಿಯೂ ಆಗಿದ್ದರು. ಅವರ ಸ್ಮಾರಕ ಮಾಡುವುದರಲ್ಲಿ ತಪ್ಪಿಲ್ಲ. ಸ್ಮಾರಕ ಆಗಬೇಕು ಎಂದು ಜನರ ಬಯಕೆಯಂತೆ ಸರ್ಕಾರವೂ ಸ್ಪಂದಿಸಲಿದೆ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ: ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ ಸವದಿ
ವಿಜಯಪುರ: ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ, ಬದಲಾವಣೆ ಇಲ್ಲ. ಮುಂದಿನ ಚುನಾವಣೆ ಸಿ.ಎಂ. ಯಡಿಯೂರಪ್ಪ ಅವರ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ. ಬಳಿಕ ಯಾರು ಸಿಎಂ ಆಗುತ್ತಾರೆ ಎಂದು ಹೈಕಮಾಂಡ್ ನಿರ್ದರಿಸುತ್ತದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಅಧಿಕಾರ ಬೇಡಿ ಪಡೆಯುವವನಲ್ಲ. ನಾನು ಯಾವುದೇ ಅಪೇಕ್ಷಿತನಲ್ಲ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೂ ಅಲ್ಲ ಎಂದು ಸ್ಪಷ್ಟಪಡಿಸಿದರು.