ಬೆಂಗಳೂರು: ಐಎಂಎ ಪ್ರಕರಣದಲ್ಲಿ ಕೇಳಿಬಂದಿದ್ದ ಪ್ರಮುಖ ಹೆಸರುಗಳಲ್ಲಿ ಮಾಜಿ ಸಚಿವ ರೋಷನ್ ಬೇಗ್ ಕೂಡ ಒಬ್ಬರು. ಐಎಂಎ ಸಂಸ್ಥಾಪಕ ಹಾಗೂ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್ ನಿಂದ ರೋಷನ್ ಬೇಗ್ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ಆರೋಪದಡಿ 2020ರ ನವೆಂಬರ್ 22 ರಂದು ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿತ್ತು. ಆ ನಂತರ ಜಾಮೀನು ಪಡೆದು ಹೊರಗೆ ಬಂದಿದ್ದರು.
ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್ನಿಂದ ಅಕ್ರಮವಾಗಿ ಹಣ ಪಡೆದಿದ್ದಾರೆ ಎನ್ನುವುದು ಸಾಬೀತಾದ ನಂತರ ಇವರ ಆಸ್ತಿ ಮುಟ್ಟುಗೋಲಿಗೆ ನ್ಯಾಯಲಯ ಆದೇಶಿಸಿತ್ತು.
ನ್ಯಾಯಲಯ ಆದೇಶ ನೀಡಿ ಸಾಕಷ್ಟು ದಿನಗಳು ಕಳೆದರೂ ಆಸ್ತಿ ಮುಟ್ಟುಗೋಲಿಗೆ ಸರ್ಕಾರ ಮುಂದಾಗಿರಲಿಲ್ಲ, ಆದ ಕಾರಣ ಕಳೆದ ಜೂನ್ ತಿಂಗಳಲ್ಲಿ ಸರ್ಕಾರಕ್ಕೆ ಚಾಟಿ ಬೀಸಿದ್ದ ನ್ಯಾಯಲಯ ಸಬೂಬುಗಳನ್ನು ಹೇಳಬೇಡಿ, ಮೊದಲು ಆಸ್ತಿ ಜಪ್ತಿ ಮಾಡಿ, ಠೇವಣಿದಾರರ ಹಣವನ್ನು ಹೀಗೆ ಬಿಡುವುದು ಸಾಧ್ಯವೇ ಎಂದು ಗರಂ ಆಗಿತ್ತು.
ಐಎಂಎ ಸಂಸ್ಥೆಯಿಂದ ಬಹುಕೋಟಿ ವಂಚನೆ ಪ್ರಕರಣದಲ್ಲಿ 36ನೇ ಆರೋಪಿಯಾಗಿರುವ ರೋಷನ್ ಬೇಗ್ ಅವರ ಆಸ್ತಿಯನ್ನು ಬುಧವಾರ (ಜುಲೈ 7) ರಂದು ಸರ್ಕಾರ ಜಪ್ತಿ ಮಾಡಿದೆ. ಪ್ರಸ್ತುತ ರೋಷನ್ ಬೇಗ್ ಗೆ ಸೇರಿದ ಸ್ಥಿರಾಸ್ತಿ, ಬ್ಯಾಂಕ್ ಅಕೌಂಟ್ ಜಪ್ತಿ ಮಾಡಲಾಗಿದ್ದು ಎಷ್ಟು ಪ್ರಮಾಣದ ಆಸ್ತಿಯನ್ನು ಸರ್ಕಾರ ಜಪ್ತಿ ಮಾಡಿದೆ ಎನ್ನುವುದು ತಿಳಿಯಬೇಕಿದೆ. ಈ ಪ್ರಕರಣದ ಕುರಿತು ಸರ್ಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್ ವಾದ ಮಂಡಿಸಿದ್ದರು.
ಈ ವೇಳೆ ಸರ್ಕಾರಕ್ಕೆ ಚಾಟಿ ಬೀಸಿದ ನ್ಯಾಯಲಯ ಮಾಜಿ ಸಚಿವ ಎಂದು ಆಸ್ತಿ ಜಪ್ತಿ ಮಾಡಲು ವಿಳಂಬ ಮಾಡಿದ್ದೀರಿ. ಅರ್ಧ ಡಜನ್ ಆದೇಶ ನೀಡಿದ ನಂತರ ಜಪ್ತಿ ಮಾಡಲು ಮುಂದಾಗಿದ್ದೀರಿ.
ಸರ್ಕಾರಿ ಶಾಲೆಗೆ ನೀಡಿದ ದೇಣಿಗೆ ಹಿಂತಿರುಗಿಸಿಲ್ಲ. ಐಎಂಎ ಯಿಂದ ಸರ್ಕಾರಿ ಶಾಲೆಗೆ 12.82 ಕೋಟಿ ದೇಣಿಗೆ ನೀಡಿರುವುದರಿಂದ ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ತಿಳಿಸಿತ್ತು. ಠೇವಣಿದಾರರ ಹಣ ದೇಣಿಗೆ ಪಡೆದಿರುವುದು ಸರಿಯೇ ಎಂದು ನ್ಯಾಯಲಯ ಪ್ರಶ್ನಿಸಿದೆ.
ಸರ್ಕಾರವು ಯಾಕೋ ಐಎಂಎ ಬಗ್ಗೆ ಮೃದು ಧೋರಣೆ ತಳೆದಿದೆ, ಅಲ್ಲದೇ ಸಕ್ಷಮ ಪ್ರಾಧಿಕಾರದೊಂದಿಗೆ ಸಹಕರಿಸುತ್ತಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ ತೆಗೆದುಕೊಂಡಿತು. ಐಎಂಎ ಯಿಂದ ಸರ್ಕಾರಿ ಶಾಲೆಗೆ ನೀಡಿರುವ 12.82 ಕೋಟಿ ದೇಣಿಗೆ ಹಿಂತಿರುಗಿಸುವ ಬಗ್ಗೆ ಶೀಘ್ರದಲ್ಲೇ ಸರ್ಕಾರ ತನ್ನ ನಿಲುವು ಏನು ಎಂಬುದನ್ನು ತಿಳಿಸಬೇಕು ಎಂದು ನ್ಯಾಯಾಲಯ ಸೂಚಿಸಿತು. ಈ ಪ್ರಕರಣದ ಕುರಿತು ಮತ್ತೆ ಜುಲೈ 19 ಕ್ಕೆ ಮತ್ತೆ ವಿಚಾರಣೆ ನಡೆಸುವುದಾಗಿ ಮುಂದೂಡಿತು.
ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಬೆನ್ನಿಗೆ ನಿಲ್ಲಲಿಲ್ಲ ಎಂದು ಮುನಿಸಿಕೊಂಡಿದ್ದ ರೋಷನ್ ಬೇಗ್, ಬಿಜೆಪಿಯ ಕದವನ್ನು ತಟ್ಟಿದ್ದರೂ ಆದರೆ ಅಲ್ಲಿ ಯಾರೂ ಕೂಡ ಪಕ್ಷದ ಬಾಗಿಲನ್ನು ತೆಗೆಯಲೇ ಇಲ್ಲ. ಏನೆಲ್ಲಾ ಕಸರತ್ತು ಮಾಡಿ ಈ ಪ್ರಕರಣದಿಂದ ಹೊರಗೆ ಬರಬೇಕು ಎಂದು ಒದ್ದಾಡಿದರೂ ಮಾಜಿ ಸಚಿವರ ಎಲ್ಲಾ ಲೆಕ್ಕಾಚಾರಗಳು ಕೈ ಕೊಟ್ಟು ಈಗ ಆಸ್ತಿ ಜಪ್ತಿಗೆ ಒಳಗಾಗಿದ್ದಾರೆ.