ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ಪುನರ್ ರಚನೆಯಾಗಲಿದೆ. ಸಂಜೆ 5.30ಕ್ಕೆ ಸಂಪುಟ ಪುನರ್ ರಚನೆ ಪ್ರಕ್ರಿಯೆ ಆರಂಭವಾಗಲಿದೆ. ಬಳಿಕ ಆಯ್ಕೆಯಾದ ನೂತನ ಸಂಸದರು 6 ಗಂಟೆ ವೇಳೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಸಂಪುಟ ರಚನೆಯಲ್ಲಿ ಹಿಂದುಳಿದ ವರ್ಗ ಮತ್ತು ಎಸ್ಸಿ, ಎಸ್ಟಿ ಸಂಸದರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಹೇಗಾದರೂ ಸರಿ ಸಣ್ಣಸಣ್ಣ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡುವ ಯೋಚನೆ ಬಿಜೆಪಿ ಹೈಕಮಾಂಡ್ನದ್ದು. ಮುಂದಿನ ವರ್ಷ ನಡೆಯಲಿರುವ ಪಂಚರಾಜ್ಯ ವಿಧಾನಸಭಾ ಚುನಾವಣೆ ಗೆಲ್ಲುವ ಸಲುವಾಗಿ ಈ ಸಮುದಾಯಗಳಿಗೆ ಅವಕಾಶ ನೀಡಲಿದ್ದಾರೆ.
ಮೈತ್ರಿ ಪಕ್ಷಗಳಿಗೆ ಆದ್ಯತೆ, ಜಾತಿ ಸಮೀಕರಣಗಳ ಮಾನದಂಡ ಆಧಾರದ ಮೇಲೆ ಸಂಪುಟ ಪನರ್ ರಚೆನೆಯಾಗಲಿದೆ. ಸದ್ಯ ಕ್ಯಾಬಿನೆಟ್ನಲ್ಲಿರುವ ಅಸಮರ್ಥ ಸಚಿವರಿಗೆ ಗೇಟ್ ಪಾಸ್ ನೀಡಿ ಉತ್ತಮ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ.
ಇನ್ನು, ನ್ಯೂಸ್ಫಸ್ಟ್ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಈಗಾಗಲೇ ದಲಿತ ಸಮುದಾಯದ ಪ್ರಭಾವಿ ಸಂಸದರಾದ ಡಾ.ಉಮೇಶ್ ಜಾಧವ್, ರಮೇಶ್ ಜಿಗಜಿಣಗಿ ಹಾಗೂ ಎ. ನಾರಾಯಣಸ್ವಾಮಿ ಕೇಂದ್ರದ ನಾಯಕರ ಕರೆ ಮೇರೆಗೆ ದೆಹಲಿಗೆ ದೌಡಾಯಿಸಿದ್ದಾರೆ.
ಇತ್ತೀಚೆಗೆ ಇಬ್ಬರು ಸಚಿವರು ನಿಧನ ಹೊಂದಿದ್ದಾರೆ. ಶಿವಸೇನೆಯೊಂದಿಗೆ ಮೈತ್ರಿ ಸಖ್ಯ ತೊರೆದ ಕಾರಣ ಕೆಲ ಸಚಿವ ಸ್ಥಾನ ಖಾಲಿಯಾಗಿವೆ. ಸದ್ಯ ಮೋದಿ ಸಂಪುಟದಲ್ಲಿ 53 ಮಂದಿ ಸಚಿವರಿದ್ದಾರೆ. ಇನ್ನೂ 28 ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ.