ಯಾದಗಿರಿ: ಜೂ.28ರ ಬೆಳಗ್ಗೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದ ದುರಂತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆ ನಡೆದು ಎರಡು ದಿನ ಕಳೆದರೂ ಆ ಗ್ರಾಮದ ಪ್ರತಿ ಮನೆಯಲ್ಲೂ ವಿಧಿಯೇ ನೀನೆಷ್ಟು ಕ್ರೂರಿ? ತಂದೆ-ತಾಯಿ ಜತೆ ಆ ನಾಲ್ವರು ಪುಟ್ಟ ಮಕ್ಕಳನ್ನೂ ಬಲಿ ಪಡೆದು ಬಿಟ್ಟೆಯಾ? ಎಂದು ಮಮ್ಮಲ ಮರುಗುತ್ತಿದ್ದಾರೆ.
ಅಂದು, ಒಂದೇ ಕುಟುಂಬದ ಆರು ಜನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಭೀಮರಾಯ ಸುರಪುರ (45), ಇವರ ಪತ್ನಿ ಶಾಂತಮ್ಮ ಸುರಪುರ (36) ಮತ್ತು ಮಕ್ಕಳಾದ ಸುಮಿತ್ರಾ (12), ಶ್ರೀದೇವಿ (13), ಶಿವರಾಜ (9), ಲಕ್ಷ್ಮೀ (4) ಮೃತರು. ಕಳೆದ ತಿಂಗಳ ಹಿಂದಷ್ಟೇ ಹಿರಿಮಗಳನ್ನು ಮದುವೆ ಮಾಡಿದ್ದ ಭೀಮರಾಯ ದಂಪತಿ, ಉಳಿದ ಮಕ್ಕಳೊಂದಿಗೆ ತಾವೇ ತೋಡಿಸಿದ್ದ ಕೃಷಿ ಹೊಂಡಕ್ಕೆ ಹಾರಿ ದುರಂತ ಅಂತ್ಯ ಕಂಡ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ.