ಬಾಗಲಕೋಟೆ: ದೂರು ನೀಡಲು ಪೊಲೀಸ್ ಠಾಣೆಗೆ ಬಂದವರ ಮೇಲೆ ಪಿಎಸ್ಐ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪಿಎಸ್ಐ ರವಿ ಪವಾರ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೊದಲ ಪತ್ನಿಗೆ ಗೊತ್ತಾಗದಂತೆ ತುಳಸಿಗೇರಿ ಗ್ರಾಮದ ನಿವಾಸಿ ರಂಗಪ್ಪ ಎಂಬುವವನು ಎರಡನೇ ಮದುವೆಯಾಗಿದ್ದ. ರಂಗಪ್ಪನ ಮೊದಲ ಪತ್ನಿ ಲಕ್ಷ್ಮೀ ಸಹೋದರ ಸಚಿನ್ ಗಿಡ್ಡಿ, ಲಕ್ಷ್ಮೀ ಭಾವ ಶ್ರೀಕಾಂತ್ ರಂಗಪ್ಪನ ವಿರುದ್ಧ ದೂರು ನೀಡಲು ಠಾಣೆಗೆ ಬಂದಾಗ ಹಲ್ಲೆ ನಡೆದಿದೆ.
ರಂಗಪ್ಪ ಪವಿತ್ರಾ ಎಂಬುವರ ಜೊತೆ ಎರಡನೇ ಮದುವೆಯಾಗಿದ್ದ. ಈ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಸಚಿನ್ ಗಿಡ್ಡಿ, ಶ್ರೀಕಾಂತ್ ಬಂದಿದ್ದರು. ಈ ವೇಳೆ ಪಿಎಸ್ಐ ದೂರು ನೀಡಲು ಬಂದವರ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಲೆ, ಕಣ್ಣಿಗೆ ಮತ್ತು ದೇಹಕ್ಕೆ ಪೆಟ್ಟಾದ ಕಾರಣ ಇಬ್ಬರು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಿಎಸ್ಐ ದರ್ಪಕ್ಕೆ ಗಾಯಾಳು ಕುಟುಂಬಸ್ಥರು ಎಸ್ಪಿ ಮೊರೆ ಹೋಗಿ, ಪಿಎಸ್ಐ ರವಿ ಪವಾರ್ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಬ್ರಾಸ್ಲೆಟ್ ಹಿಂದಿರುಗಿಸದ ವ್ಯಕ್ತಿಯ ಬಂಧನ
ಕೈಗೆ ಸಿಕ್ಕಿದ್ದ ಬ್ರಾಸ್ಲೆಟ್ನ ಹಿಂದಿರುಗಿಸದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಶೆಟ್ಟಿಹಳ್ಳಿ ಕವಿರಾಜ್ ಅಂಗಡಿ ಮುಂದೆ ಚಿನ್ನದ ಬ್ರಾಸ್ಲೆಟ್ ಕಳೆದುಕೊಂಡಿದ್ದರು. ಸ್ಥಳಕ್ಕೆ ಬಂದಿದ್ದ ಕುಮಾರ್ಗೆ ಚಿನ್ನದ ಬ್ರಾಸ್ಲೆಟ್ ಸಿಕ್ಕಿತ್ತು. ಬ್ರಾಸ್ಲೆಟ್ ಅಡಮಾನವಿಟ್ಟು ಕುಮಾರ್ ಹಣ ಪಡೆದಿದ್ದ. ಕುಮಾರ್ಗೆ ಬ್ರಾಸ್ಲೆಟ್ ಸಿಕ್ಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಯಶವಂತಪುರ ನಿವಾಸಿಯಾದ ಕುಮಾರ್ನ ಬಂಧಿಸಿದ್ದಾರೆ.