ಹಾಸನ: ಹಾಸನ ಹೊರವಲಯದ ಹೊನ್ನೇನಹಳ್ಳಿ ರಸ್ತೆಯಲ್ಲಿರುವ GRR ಕೆನಲ್ಸ್ ನಾಯಿ ಫಾರಂನಿಂದ ದುಬಾರಿ ಬೆಲೆಯ ನಾಯಿಗಳನ್ನು ಕಳ್ಳತನ ಮಾಡಿದ್ದ ಕಳ್ಳರು ಅಂದರ್ ಆಗಿದ್ದಾರೆ. ಕಳ್ಳನ ಪತ್ತೆಗೆ ಸಹಕಾರಿಯಾಗಿದ್ದು ವಾಟ್ಸಾಪ್ ಗ್ರೂಪ್.
ಹಾಸನ ನಗರದ ಹೊರವಲಯದ ಗೆಂಡೆಕಟ್ಟೆ ಫಾರೆಸ್ಟ್ ಬಳಿ ದಿವಾಕರ್ ಎಂಬವರಿಗೆ ಸೇರಿದ GRR ಕೆನಲ್ಸ್ ನಾಯಿ ಫಾರಂನಲ್ಲಿ ಜೂ.18ರ ರಾತ್ರಿ ಒಂದೂವರೆ ಲಕ್ಷ ರೂ. ಮೌಲ್ಯದ ನಾಲ್ಕು ನಾಯಿಗಳನ್ನು ನಾಲ್ವರು ಸೇರಿ ಕದ್ದೊಯ್ದಿದ್ದರು. ರಾಟ್ ವೀಲರ್, ಲ್ಯಾಬ್ರಡಾರ್, ಡ್ಯಾಶೌಂಡ್ ಮತ್ತು ಗೋಲ್ಡನ್ ರಿಟ್ರೀವರ್ ಜೊತೆಗೆ ಏರ್ ಫ್ರೆಶರ್, ಕಟ್ಟಿಂಗ್ ಮಿಷನ್ಗಳನ್ನೂ ಹೊತ್ತೊಯ್ದಿದ್ದರು. ಮಾರನೇ ದಿನ ಇದನ್ನು ತಿಳಿದ ಫಾರಂ ಮಾಲೀಕರು ಬಡಾವಣೆ ಠಾಣೆಗೆ ದೂರು ನೀಡಿದ್ದರು.ನಾಯಿ ಕಳ್ಳತನ ಪ್ರಕರಣ ದಾಖಲಿಸಿಕೊಂಡ ಹಾಸನ ಬಡಾವಣೆ ಠಾಣೆ ಪೊಲೀಸರು ತನಿಖೆ ಆರಂಭಿಸಿದರು. ಈ ನಡುವೆ ದಿವಾಕರ್, ವ್ಯಾಟ್ಸಪ್ ಮೂಲಕ ಸ್ನೇಹಿತರು ಮತ್ತು ಮಾರಾಟಗಾರರ ಸಂಘದ ಸದಸ್ಯರು ಹಾಗೂ ಗ್ರಾಹಕರ ಗ್ರೂಪ್ಗಳಿಗೆ, ತಾವು ಸಾಕಿದ್ದ ನಾಯಿ ಕಳುವಾಗಿರುವುದನ್ನು ಫೋಟೋ ಸಮೇತ ಶೇರ್ ಮಾಡಿದ್ದರು. ಇತ್ತ ಲಕ್ಷಾಂತರ ರೂ. ಬೆಲೆ ಬಾಳುವ ನಾಯಿ ಕದ್ದಿದ್ದ ಚೋರರು, ಅವುಗಳನ್ನು ಮಾರಾಟ ಮಾಡಲು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದರು. ಅವರು ಸಹ ನಾಯಿ ಮಾರಾಟಕ್ಕಿವೆ. ಬೇಕಾದವರು ತಮ್ಮನ್ನು ಸಂಪರ್ಕಿಸಬಹುದು ಎಂದು ವಾಟ್ಸಾಪ್ ಗ್ರೂಪ್ಗೇ ಫೋಟೋ ಸಮೇತ ಶೇರ್ ಮಾಡಿದ್ದರು.
ನಾಯಿಕೊಳ್ಳಲು ಆಸಕ್ತಿವುಳ್ಳವರು ತಮ್ಮನ್ನು ಸಂಪರ್ಕಿಸಿ ಎಂದು ಕದ್ದ ನಾಯಿಗಳ ಫೋಟೋ ಕಳಿಸಿದ್ದರು. ಇದಾದ ಮೇಲೆ ಒಂದು ನಾಯಿ ಮಾರಾಟ ಸಹ ಆಗಿತ್ತು. ಇದನ್ನು ಗಮನಿಸಿದ ಸ್ನೇಹಿತರೊಬ್ಬರು, ಕೂಡಲೇ ದಿವಾಕರ್ಗೆ ಮಾಹಿತಿ ನೀಡಿದ್ದಾರೆ. ದಿವಾಕರ್ ಅದನ್ನು ಪೊಲೀಸರಿಗೆ ತಿಳಿಸಿದ್ದು, ಈ ಮಾಹಿತಿ ಆಧರಿಸಿ ದಿಢೀರ್ ಕಾರ್ಯಪ್ರವೃತ್ತರಾದ ಬಡಾವಣೆ ಪೊಲೀಸರು, ಪ್ರಮುಖ ಆರೋಪಿ ಹೊಳೆನರಸೀಪುರ ಮೂಲದ ರೋಹನ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ನಿಜಾಂಶ ಬಾಯಿ ಬಿಟ್ಟಿದ್ದಾನೆ. ಈತನೊಂದಿಗೆ ಕೈ ಜೋಡಿಸಿದ್ದ ಮೂರು ಮಂದಿಯನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಹಣದ ದುರಾಸೆಯಿಂದ ಕಳ್ಳತನಕ್ಕಿಳಿದ ಖದೀಮರು ಕಂಬಿ ಎಣಿಸುವಂತಾಗಿದೆ.ಪ್ರಕರಣದ ಪ್ರಮುಖ ಆರೋಪಿ ರೋಹನ್ ಕಾಲೇಜು ವಿದ್ಯಾರ್ಥಿ ಎನ್ನಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಕಾಲೇಜಿಗೆ ರಜೆ ಇತ್ತು. ಈ ನಡುವೆ ಖರ್ಚಿಗೆ ಹಣವಿಲ್ಲ ಎಂದು ಆಟೋ ಓಡಿಸಲು ಆರಂಭಿಸಿದ್ದ. ಆಟೋ ಜೊತೆಯಲ್ಲೇ ಕಳ್ಳತನವನ್ನು ಮಾಡುತ್ತಿದ್ದ. ಆಟೋ ಓಡಿಸುವಾಗಲೆ ಬ್ರೀಡ್ ನಾಯಿಗಳನ್ನು ಸಾಕಿದ್ದ ನರ್ಸರಿ ಈತನ ಕಣ್ಣಿಗೆ ಬಿದ್ದಿತ್ತು. ಲಾಕ್ಡೌನ್ ಕಾರಣದಿಂದ ಬೆಂಗಳೂರಿಂದ ಬಂದಿದ್ದ ತನ್ನ ಸ್ನೇಹಿತರ ಜೊತೆಗೂಡಿ ನಾಯಿಗಳನ್ನು ಕಳುವು ಮಾಡಿದ್ದ.