ಹಾಸನ: ‘ಜೆಡಿಎಸ್ ತೊರೆದು ಬಿಜೆಪಿ ಸೇರುವಂತೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ತಮಗೆ ₹ 25 ಲಕ್ಷ ಆಮಿಷವೊಡ್ಡಿ, ಮುಂಗಡವಾಗಿ ₹10 ಲಕ್ಷ ನಗದು ನೀಡಿದ್ದಾರೆ’ ಎಂದು ಅರಸೀಕೆರೆ ನಗರಸಭೆ ಎರಡನೇ ವಾರ್ಡ್ ಸದಸ್ಯೆ ಕಲೈ ಅರಸಿ ಆರೋಪಿಸಿದರು.
ಹತ್ತು ಲಕ್ಷ ರೂಪಾಯಿ ಹಣದ ಬಂಡಲ್ನೊಂದಿಗೆ ಶಾಸಕರಾದ ಎಚ್.ಡಿ.ರೇವಣ್ಣ, ಕೆ.ಎಂ.ಶಿವಲಿಂಗೇಗೌಡ ಜತೆ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸೇರುವಂತೆ ಒಂದು ವಾರದಿಂದ ಒತ್ತಡ ಇತ್ತು. ಶುಕ್ರವಾರ ರಾತ್ರಿ ಹತ್ತು ಗಂಟೆಗೆ ಮನೆಗೆ ಬಂದ ಸಂತೋಷ್ ಅವರ ಆಪ್ತ ಸ್ಕಂದನ್ ಹತ್ತು ಲಕ್ಷ ರೂಪಾಯಿ ನೀಡಿ, ಸಂತೋಷ್ಗೆ ಕರೆ ಮಾಡಿಕೊಟ್ಟರು. ಸರ್ಕಾರ ನಮ್ಮ ಕೈಯಲಿದೆ. ಏನು ಬೇಕಾದರೂ ಮಾಡಬಹುದು. ಮುಂಗಡವಾಗಿ ಹತ್ತು ಲಕ್ಷ ರೂಪಾಯಿ ತಲುಪಿಸಿದ್ದೇನೆ. ಉಳಿದ ಹಣವನ್ನು ನಂತರ ನೀಡಲಾಗುವುದು. ಬಿಜೆಪಿ ಸೇರಲೇಬೇಕು ಎಂದು ಬೆದರಿಕೆ ಹಾಕಿದರು. ಹಣ ವಾಪಸ್ ತೆಗೆದುಕೊಂಡು ಹೋಗುವಂತೆ ಹೇಳಿದರೂ ಕೇಳಲಿಲ್ಲ’ ಎಂದು ಮಾಹಿತಿ ನೀಡಿದರು.
‘ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ. ಹಣ ಕೊಟ್ಟು ಸದಸ್ಯರನ್ನು ಸಂತೋಷ್ ಖರೀದಿಸುತ್ತಿದ್ದಾರೆ. ಹಣ ಬೇಡವೆಂದರೂ ಇಟ್ಟು ಹೋಗಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ಆಗಬೇಕು’ ಎಂದು ಶಾಸಕ ರೇವಣ್ಣ ಆಗ್ರಹಿಸಿದರು.
‘ಕನ್ನಡ ಓದಲು ಬಾರದ ಸದಸ್ಯೆ ಕಲೈ ಅರಸಿ ಅವರಿಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ನಗರಸಭೆಯಲ್ಲಿ ಬಹುಮತಕ್ಕಾಗಿ ಸಂತೋಷ್ ವಾಮಮಾರ್ಗದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಶಿವಲಿಂಗೇಗೌಡ ಕಿಡಿಕಾರಿದರು.